ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಆಯ್ಕೆ ವಿಚಾರ ಗೊಂದಲ ಬೇಡ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ನಿಂದ ಕುದ್ರೋಳಿ ಕ್ಷೇತ್ರಕ್ಕೆ 2026-27 ನೇ ಸಾಲಿನ ಆಡಳಿತ ಸಮಿತಿಗೆ ಅಧಿಕೃತವಾಗಿ 9 ಜನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಈ ಹಿಂದೆ ಕ್ಷೇತ್ರದ ಸಮಿತಿಯಿಂದ ಉಚ್ಚಾಟನೆಗೊಂಡಿದ್ದ ರವಿಶಂಕರ್ ಮಿಜಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ ವಿಚಾರ ಅಧಿಕೃತವಲ್ಲ. ಕೋರ್ಟ್ ಆದೇಶ ಎಂಬಂತೆ ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸುವ ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಆಯ್ಕೆ ವಿಚಾರದಲ್ಲಿ ಗೊಂದಲ ಬೇಡ ಎಂದು ಕುದ್ರೋಳಿ ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಕುದ್ರೋಳಿ ಶ್ರೀಕ್ಷೇತ್ರ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಂತೆ ಶನಿವಾರ ಕುದ್ರೋಳಿ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.*
2025ರ ಜೂನ್ 20ರಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕಾರ್ಯದರ್ಶಿ ಮಾಧವ ಸುವರ್ಣ ಅವರು ಶ್ರೀಕ್ಷೇತ್ರ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಡಳಿತ ಸಮಿತಿಯ ಸಭೆ ನಡೆಸಿ ನೂತನ ಸಮಿತಿಯ ಘೋಷಣೆ ಮಾಡಲಾಗಿದೆ. ಸಭೆಯ ಬಗ್ಗೆ ಆಡಳಿತ ಸಮಿತಿಯ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು, ಆದರೆ ಕೆಲವರು ಗೈರಾಗಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಹಾಗೂ 1920ರ ಸಾಹುಕಾರ್ ಕೊರಗಪ್ಪ ಅವರು ಬರೆದ ಉಯಿಲಿನಂತೆ ಅವರ ಕುಟುಂಬದ ಯೋಗ್ಯ ಸದಸ್ಯನನ್ನು ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಹುಕಾರ್ ಕೊರಗಪ್ಪ ಅವರ ಮೊಮ್ಮಗ ಜೈರಾಜ್ ಎಚ್.ಸೋಮಸುಂದರಂ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಗೈರಾಗಿದ್ದ ಕೆಲವರು ಈ ಆಯ್ಕೆಯನ್ನು ಕೋರ್ಟ್ ಮೆಟ್ಟಿಲೇರಿ ಪ್ರಶ್ನಿಸಿದ್ದರೂ ನಮಗೆ ಕೋರ್ಟ್ ಯಾವುದೇ ತಡೆ ನೀಡಿಲ್ಲ ಎಂದರು.
ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಬಳಿ ಇರುವ ನಾರಾಯಣ ಗುರು ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ವಾರ್ಷಿಕ ಪ್ರತಿನಿಧಿ ಸಭೆ, ಹೊಸ ಸಮಿತಿ ರಚನೆಯಾಗುತ್ತಾಲೇ ಇರುತ್ತದೆ. ಇಲ್ಲಿಯವರೆಗೆ ಹಲವರಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ನ ಸದಸ್ಯತ್ವ ನೀಡುತ್ತಿರಲಿಲ್ಲ, ಆದರೆ ಎಚ್ಎಸ್ ಸಾಯಿರಾಮ್, ಊರ್ಮಿಳಾ ರಮೇಶ್ ಕುಮಾರ್, ರವಿಶಂಕರ್ ಮಿಜಾರ್ ಸೇರಿದಂತೆ ಹಲವರಿಗೆ ಯೂನಿಯನ್ನ ಸದಸ್ಯತ್ವ ನೀಡಿ ಹೊಸ ಸಮಿತಿ ರಚಿಸಿರುತ್ತಾರೆ. ಈ ತಂಡ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಕೋರ್ಟ್ನ ಆದೇಶದಂತೆ ಕುದ್ರೋಳಿ ಕ್ಷೇತ್ರಕ್ಕೆ ಅಖಿಲ ಭಾರತ ಬಿಲ್ಲವರ ಯೂನಿಯನ್ನಿಂದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದು, ಕೋರ್ಟ್ನ ಆದೇಶವನ್ನೇ ತಿರುಚಿ ಸುಳ್ಳು ಮಾಹಿತಿ ನೀಡಿದ್ದಾರೆ, ಈ ತಂಡ ಮಾಧ್ಯಮಕ್ಕೆ ಯಾವುದೇ ಕೋರ್ಟ್ ದಾಖಲೆಗಳನ್ನು ನೀಡದೆ ಕ್ಷೇತ್ರದ ಬಗ್ಗೆ ಸುಳ್ಳು ಮಾಹಿತಿಯನ್ನು ಸಾರ್ವಜನಿಕವಾಗಿ ಹಬ್ಬಿಸುತ್ತಿದೆ, ಈ ಬಗ್ಗೆ ಸಮಾಜಬಾಂದವರು ಯಾವುದೇ ಗೊಂದಲ ಪಡುವ ಅಗತ್ಯ ಇಲ್ಲ ಎಂದರು.
ಶ್ರೀಕ್ಷೇತ್ರ ಕಾನೂನು ಸಲಕೆಗಾರ ಚಿದಾನಂದ ಕೆದಿಲಾಯ ಅವರು ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಆಯ್ಕೆ ಹಾಗೂ ನ್ಯಾಯಾಲಯದ ಅದೇಶಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಶ್ರೀಕ್ಷೇತ್ರ ರೂವಾರಿ ಬಿ.ಜನಾರ್ದನ ಪೂಜಾರಿ, ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಹಾಗೂ ಸಾಹುಕಾರ್ ಕೊರಗಪ್ಪ ಅವರ ಮೊಮ್ಮಗ ಜೈರಾಜ್ ಎಚ್.ಸೋಮಸುಂದರಂ, ಕ್ಷೇತ್ರದ ಪ್ರಮುಖರಾದ ಕಿಶೋರ್ ಕುಮಾರ್ ದಂಡಕೇರಿ, ಕೃತಿನ್ ದೀರಜ್ ಅಮೀನ್, ಲತೇಶ್ ಸುವರ್ಣ, ಗೌರವಿ ರಾಜಶೇಖರ್, ರಾಧಕೃಷ್ಣ, ಶ್ರೀನಾಥ್, ಚಂದನ್ದಾಸ್ ಉಪಸ್ಥಿತರಿದ್ದರು.