ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ಸೇತುವೆ: ಸೆಪ್ಟಂಬರ್‌ಗೆ ಪೂರ್ಣ

ಸುಲ್ತಾನ್ ಬತ್ತೇರಿ-ತಣ್ಣೀರುಬಾವಿ ಸೇತುವೆ: ಸೆಪ್ಟಂಬರ್‌ಗೆ ಪೂರ್ಣ


ಮಂಗಳೂರು: ಸುಲ್ತಾನ್ ಬತ್ತೇರಿ ಬಳಿ ಫಲ್ಗುಣಿ (ಗುರುಪುರ ನದಿ) ನದಿಯಿಂದ ತಣ್ಣೀರುಬಾವಿ ಸಂಪರ್ಕಸುವ ಅತ್ಯಾಧುನಿ ತಂತ್ರಜ್ಞಾನದ ಬೋ ಸ್ಟ್ರಿಂಗ್ ಸೇತುವೆ ಕಾಮಗಾರಿ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಸ್ಥಳೀಯರು ನಗರ ಪ್ರವೇಶಕ್ಕೆ ಸುಲಭವಾಗಲಿದೆ. ಪ್ರಸ್ತುತ ಇಲ್ಲಿನ ಜನರು ಫೆರ್ರಿ ಮೂಲಕ ಅಥವಾ ಸುತ್ತು ಬಳಸಿ ಸುಮಾರು ಅರ್ಧ ಗಂಟೆ ವ್ಯಯಿಸಿ ನಗರ ಪ್ರದೇಶಕ್ಕೆ ಸಂಚಾರ ಮಾಡಬೇಕಾಗಿದೆ. ಸ್ಮಾರ್ಚ್ ಸಿಟಿ ಯೋಜನೆಯಡಿ 64 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಿರ್ಮಾಣವಾಗುತ್ತಿದೆ. ಇದರಿಂದ ಬೆಂಗ್ರೆ ಪ್ರದೇಶದ ಸುಮಾರು 4,000 ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಇಲ್ಲಿ ದೋಣಿಗಳು ಯಾವುದೇ ಅಡಚಣೆ ಇಲ್ಲದೆ ಸಂಚರಿಸಲು ವ್ಯವಸ್ಥೆ ಆಗಲಿದೆ. ಆಕರ್ಷಣೀಯವಾಗಿ ಸೇತುವೆ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಜೂನ್ ತಿಂಗಳ ವೇಳೆಗೆ ಬೋ ಸ್ಟ್ರಿಂಗ್  ಮೇಲೆತ್ತುವ ಕಾರ್ಯ ನಡೆಯಲಿದ್ದು, ಬಳಿಕ ದೋಣಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಸೆಪ್ಟಂಬರ್ ವೇಳೆಗೆ ಸೇತುವೆ ಲೋಕಾರ್ಪಣೆಗೆ ಗುರಿ ನೀಡಲಾಗಿದೆ. ನೀರಿನ ಆಳ ಹಾಗೂ ಸೇತುವೆಯ ಎತ್ತರ ಇಲ್ಲಿ ಯಾವುದೇ ರೀತಿಯ ಸಹಜ ಚಟುವಟಿಕೆಗಳಿಗೆ ತೊಂದರೆ ಆಗದಂತೆ ರಾಷ್ಟ್ರೀಯ ಜಲಮಾರ್ಗ ಮಾರ್ಗಸೂಚಿಯಡಿ ಮಾಡಲಾಗುತ್ತಿದೆ. ಸೇತುವೆಯಲ್ಲಿ ಎಲ್ಲಾ ರೀತಿಯ ವಾಹನಗಳು ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಂಗಳೂರು ನಗರಕ್ಕೆ ಇದೊಂದು ಪ್ರಮುಖ ಹಾಗೂ ಮಹತ್ವದ ಯೋಜನೆ ಎಂದವರು ಹೇಳಿದರು.

ಬ್ಲ್ಯೂಫ್ಲ್ಯಾಗ್ ಬೀಚ್‌ಗೂ ಈ ಸೇತುವೆ ಎರಡನೆ ಸಂಪರ್ಕ ರಸ್ತೆಯಾಗಿ ಬಳಕೆಯಾಗಲಿದೆ. ಇದರಿಂದ ಪ್ರವಾಸೋದ್ಯಕ್ಕೂ ಒತ್ತು ನೀಡಿದಂತಾಗುತ್ತದೆ. ಸ್ಥಳೀಯ ಜನರ ಸಂಚಾರದ ಜತೆಗೆ ವಾಣಿಜ್ಯ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಈ ಸೇತುವೆಯಿಂದ ಸಹಕಾರವಾಗಲಿದೆ ಎಂದು ಹೇಳಿದರು.

ನೀರಿನ ಸಮಸ್ಯೆ..

ಮಳೆ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಪ್ರವಾಹ ಸಾಧ್ಯತೆಯ ಸಂದರ್ಭ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಹಿಂದಿನ ಅವಧಿಯಲ್ಲಿ ಆದ ಪ್ರವಾಹ, ಕೃತಕ ನೆರೆ, ಭೂ ಕುಸಿತಗಳ ಜಾಗಗಳ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳೊಂದಿಗೆ ಸಜ್ಜಾಗಿರಲು ಸೂಚಿಸಲಾಗಿದೆ. ತಡೆಗೋಡೆಗಳ ನಿರ್ಮಾಣಕ್ಕೆ 80 ಕೋಟಿ ರೂ. ಅನುದಾನ ದೊರಕಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಹೂಳೆತ್ತುವ ಕಾಮಗಾರಿಗೆ 9 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಬೋಸ್ಟ್ರಿಂಗ್ ಗರ್ಡರ್..

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೋ ಸ್ಟ್ರಿಂಗ್ ಮಾದರಿಯ ವಾಹನ ಸಂಚಾರ ಸೇತುವೆ ನಿರ್ಮಾಣವಾಗಿದ್ದು, ಇದು 285 ಮೀಟರ್ ಉದ್ದವನ್ನು ಹೊಂದಿದೆ. 100 ಮೀಟರ್ ನಾವಿಗೇಶನ್ ಸ್ಪಾನ್ ಹಾಗೂ 10 ಮೀಟರ್ ವರ್ಟಿಕಲ್ ಕ್ಲಿಯರೆನ್ಸ್ ಒದಗಿಸಲು ಬೋಸ್ಟ್ರಿಂಗ್ ಗರ್ಡರ್ ಅಳವಡಿಸಲಾಗಿದೆ. ರಾಷ್ಟ್ರೀಯ ಜಲಮಾರ್ಗ 43ರ ನಿಯಮಾವಳಿ ಪ್ರಕಾರ ಸೇತುವೆ ಹೈ ಟೈಡ್ ಲೈನ್‌ನಿಂದ 10 ಮೀಟರ್ ಎತ್ತರದಲ್ಲಿರಲಿದೆ. ಪ್ರಸಕ್ತ ದೋಣಿ ಸೇವೆ ಲಭ್ಯವಿಲ್ಲದ ಸಂದರ್ಭ ಸ್ಥಳೀಯ ಬೆಂಗ್ರೆ ನಿವಾಸಿಗಳು ನಗರ ತಲುಪಲು ಕೂಳೂರು ಮೂಲಕ 30ರಿಂದ 35 ನಿಮಿಷ ಕ್ರಮಿಸಬೇಕಾಗಿದೆ. ಸೇತುವೆಯಿಂದ ಬೆಂಗ್ರೆ, ತಣ್ಣೀರುಬಾವಿ ಮತ್ತು ಮಂಗಳೂರು ನಡುವಿನ ಪ್ರಯಾಣ ಸಮಯ 8ರಿಂದ 10 ನಿಮಿಷಗಳಿಗೆ ಇಳಿಕೆಯಾಗಲಿದೆ.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಾಲಿಕೆ ಮಾಜಿ ಸದಸ್ಯರಾದ ವಿನಯರಾಜ್, ಅನಿಲ್ ಕುಮಾರ್, ಕಾಂಗ್ರೆಸ್ ನಾಯಕ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಸ್ಮಾರ್ಚ್ ಸಿಟಿ ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಡಾ. ಸಂತೋಷ್ ಕುಮಾರ್, ಸ್ಮಾರ್ಚ್ ಸಿಟಿ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article