ಪದಕ ಗೆಲ್ಲಿಸುವ ಗುರಿ: ಆಂದೋಲನ
ಮಂಗಳೂರು: ಮುಂಬರುವ ದಿನಗಳಲ್ಲಿ ಜೂಡೋ ಸ್ಪೋಟ್ಸ್ನಲ್ಲಿ ಭಾರತಕ್ಕೆ ಗರಿಷ್ಠ ಪದಕ ಗೆಲ್ಲಿಸುವ ಗುರಿಯೊಂದಿಗೆ ಆಂದೋಲನ ಆರಂಭಿಸಲಾಗಿದೆ ಎಂದು ಅಂತಾರಾಷ್ಟ್ರೀಯ ರೆಫ್ರಿ ಮತ್ತು ಕರ್ನಾಟಕ ಸ್ಟೇಟ್ ಜೂಡೋ ಸ್ಪೋರ್ಟ್ಸ್ ಎಸೋಸಿಯೇಶನ್ ಅಧ್ಯಕ್ಷ ಯತೀಶ್ ನಾರಾಯಣ ಬಂಗೇರ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 2030ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2036ರಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಭಾರತ ತಂಡ ಜೂಡೋ ಸ್ಪೋರ್ಟ್ಸ್ ನಲ್ಲಿ ಪದಕ ಗೆಲ್ಲುವುದಕ್ಕೆ ಪೂರಕವಾಗಿ ಕರ್ನಾಟಕವನ್ನು ದೇಶದ ಜೂಡೋದ ಶಕ್ತಿಕೇಂದ್ರವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರಕ್ಕೆ ಸಮಗ್ರ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದೆ ಎಂದರು.
ಜೂಡೋ ಅಭಿವೃದ್ಧಿಗಾಗಿ ಕಾರ್ಯತಂತ್ರ ರೂಪಿಸಿ, ಅದನ್ನು ಸರಿಯಾದ ಹಾದಿಗೆ ಮರಳಿಸುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ವಿವಿಧ ಉಪಕ್ರಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಉಡುಪಿ- ಮಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹಾಲಿ ಕ್ರೀಡಾ ಪಟುಗಳ ಆ ವೇಳೆ ನಿವೃತ್ತಿ ಅಂಚಿಗೆ ಬರುವುದರಿಂದ ಹೊಸದಾಗಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ ಸಿದ್ಧಪಡಿಸಲಾಗುವುದು ಎಂದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಯುವ ಕ್ರೀಡಾಪಟುಗಳಿಗೆ ತರಬೇತಿ,, ಕಾರ್ಪೊರೇಟ್ ಪ್ರಾಯೋಜಕತ್ವ ಮತ್ತು ಕ್ರೀಡಾಪಟುಗಳ ಕಲ್ಯಾಣ, ಅಡಾಪ್ಟ್ ಎ ಚಾಂಪಿಯನ್, ಸಿಒಆರ್ ಉಪಕ್ರಮಗಳ ಮೂಲಕ ಕ್ರೀಡಾಪಟುಗಳ ಪೋಷಣೆ, ಸಲಕರಣೆ ಮತ್ತು ಕ್ರೀಡಾಪಟುಗಳ ಉದ್ಯೋಗ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಜಿಲೆಗಳಿಗೆ ಭೇಟಿ ನೀಡಲಾಗುವುದು ಎಂದವರು ತಿಳಿಸಿದರು.
ವಕೀಲ ಎ.ಪಿ. ಮೊಂತೇರೊ ಉಪಸ್ಥಿತರಿದ್ದರು.