ಆಳ್ವಾಸ್ ನರ್ಸಿಂಗ್ ಕಾಲೇಜಿನಿಂದ ದಾದಿಯರ ದಿನಾಚರಣೆ
Tuesday, May 12, 2026
ಮೂಡುಬಿದಿರೆ: ನರ್ಸಿಂಗ್ ಒಂದು ಕೇವಲ ವೃತ್ತಿಯಲ್ಲ. ಅದು ಮಾನವೀಯತೆ, ಕರುಣೆ ಮತ್ತು ಸೇವೆಯ ಸಂಕೇತವಾದ ಮಹೋನ್ನತ ಜೀವನಪಥ ಎಂದು ಮಣಿಪಾಲ ನರ್ಸಿಂಗ್ ಕಾಲೆಜಿನ ಡೀನ್ ಡಾ. ಜುಡಿತ್ ಆಂಜೆಲಿಟ್ಟಾ ನೊರೊನ್ಹಾ ಹೇಳಿದರು.
ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಅಂಗವಾಗಿ ಶನಿವಾರ ನಡೆದ ದೀಪ ಪ್ರಜ್ವಲನೆ ಹಾಗೂ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನರ್ಸಿಂಗ್ ಕಾಲೇಜು ಸ್ಥಾಪನೆಯಾದ ದಿನದಿಂದಲೇ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಂದ ದೀಪ ಪ್ರಜ್ವಲನೆಯನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ದೀಪ ಪ್ರಜ್ವಲನೆ ಕೇವಲ ಒಂದು ಸಂಪ್ರದಾಯವಲ್ಲ; ಅದು ಜ್ಞಾನ, ಸೇವೆ ಮತ್ತು ಮಾನವೀಯತೆಯ ಬೆಳಕನ್ನು ಸಮಾಜಕ್ಕೆ ಹಂಚುವ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿ ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಗೆ ತೊಡಗುವ ಸಂಕಲ್ಪ ಮಾಡಿದರು.
ಪ್ರಾಂಶುಪಾಲ ಡಾ.ಯತಿಕುಮಾರ್ ಸ್ವಾಮಿಗೌಡ, ಶೈಲಾ ಮೆಂಡೀಸ್, ಉಪ ಪ್ರಾಂಶುಪಾಲೆ ರೇಣುಕಾ ಭಂಡಾರಿ ಇದ್ದರು. ಕವಿತಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.
