ಜಿಲ್ಲಾ ಮಟ್ಟದಲ್ಲಿ ಕೀರ್ತಿ ತಂದ ಸೇಂಟ್ ಫಿಲೋಮಿನಾ ಕಾಲೇಜಿನ ಪುತ್ತೂರಿನ ಗ್ರಾಹಕರ ವೇದಿಕೆ
Tuesday, May 26, 2026
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಸಂಘಟನೆಗಳ ಒಕ್ಕೂಟ (ರಿ.) ಮಂಗಳೂರು ವತಿಯಿಂದ ಮೇ 23ರಂದು ಮಂಗಳೂರಿನ ಎಸ್ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಾರ್ಷಿಕ ಕಾರ್ಯ ಮೌಲ್ಯಮಾಪನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 2025-26ನೇ ಸಾಲಿನ ಅತ್ಯುತ್ತಮ ಕಾರ್ಯಚಟುವಟಿಕೆ, ಗ್ರಾಹಕ ಜಾಗೃತಿ ಕಾರ್ಯಕ್ರಮಗಳು, ಸಮುದಾಯ ಸೇವಾ ಚಟುವಟಿಕೆಗಳು, ಶೈಕ್ಷಣಿಕ ಭೇಟಿಗಳು ಹಾಗೂ ಸಾಮಾಜಿಕ ಜಾಗೃತಿ ಅಭಿಯಾನಗಳನ್ನು ಪರಿಣಾಮಕಾರಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ಸೇಂಟ್ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಗ್ರಾಹಕರ ವೇದಿಕೆಗೆ ‘ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಾಹಕರ ವೇದಿಕೆ’ ಪ್ರಶಸ್ತಿ ಲಭಿಸಿತು.
ಇದೇ ಸಂದರ್ಭದಲ್ಲಿ ಗ್ರಾಹಕರ ವೇದಿಕೆಯ ಸಂಯೋಜಕ ಪ್ರವೀಣ್ ಡಿ. ಅವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಗ್ರಾಹಕ ಜಾಗೃತಿ ಕಾರ್ಯಕ್ರಮಗಳು, ಪ್ರಾಯೋಗಿಕ ತರಬೇತಿಗಳು, ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಮುದಾಯ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದಕ್ಕಾಗಿ ‘ಅತ್ಯುತ್ತಮ ಸಂಯೋಜಕ’ ಪ್ರಶಸ್ತಿಯನ್ನು ಪಡೆದು, ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಸಫ್ರೀನಾ ಅವರು ಜಿಲ್ಲಾ ಗ್ರಾಹಕರ ಸಂಘಟನೆಗಳ ಒಕ್ಕೂಟ ನಡೆಸಿದ ವಾರ್ಷಿಕ ಮೌಲ್ಯಮಾಪನದಲ್ಲಿ ‘ಅತ್ಯುತ್ತಮ ವಿದ್ಯಾರ್ಥಿ’ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡರು.
ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಸಂಘಟನೆಗಳ ಒಕ್ಕೂಟ (ರಿ.) ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಗ್ರಾಹಕರ ವೇದಿಕೆಗಳು ಭಾಗವಹಿಸಿದ್ದವು.
ಕಾಲೇಜನ ಪ್ರಾಂಶುಪಾಲರಾದ ರೆ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಗ್ರಾಹಕರ ವೇದಿಕೆಯ ಸಂಯೋಜಕ ಪ್ರವೀಣ್ ಡಿ., ವಿದ್ಯಾರ್ಥಿನಿ ಸಫ್ರೀನಾ ಹಾಗೂ ಗ್ರಾಹಕರ ವೇದಿಕೆಯ ಸದಸ್ಯರನ್ನು ಅಭಿನಂದಿಸಿ, ಕಾಲೇಜಿಗೆ ಜಿಲ್ಲಾಮಟ್ಟದಲ್ಲಿ ಕೀರ್ತಿ ತಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

