ಅಂತರ್ಜಾಲ ಸೇವೆ ವ್ಯತ್ಯಯ: ಬಿಎಸ್ಎನ್ಎಲ್ಗೆ ದಂಡ
ಸುಳ್ಯ: ಅಂತರ್ಜಾಲ ಸೇವೆ ವ್ಯತ್ಯಯಗೊಂಡ ಪ್ರಕರಣದಲ್ಲಿ ಸೇವಾ ನ್ಯೂನತೆ ಕಂಡುಬಂದಿದ್ದು, ಬಿ.ಎಸ್.ಎನ್.ಎಲ್. ಸಂಸ್ಥೆ ಪುಚ್ಚಪ್ಪಾಡಿ ಗ್ರಾಮ ನಿವಾಸಿ ಹರಿಸುಬ್ರಹ್ಮಣ್ಯ ಅವರಿಗೆ ಪರಿಹಾರ ಪಾವತಿಸಬೇಕೆಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಹರಿಸುಬ್ರಹ್ಮಣ್ಯ ಅವರು 2019ರ ಫೆಬ್ರವರಿಯಿಂದ ಬಿ.ಎಸ್.ಎನ್.ಎಲ್. ಏರ್ಫೈಬರ್ ಸಂಪರ್ಕವನ್ನು ಬಳಸುತ್ತಿದ್ದು, ತಿಂಗಳಿಗೆ ರೂ.589 ಪಾವತಿಸುತ್ತಿದ್ದರು. ಆದರೆ 2024ರ ಡಿಸೆಂಬರ್ 26ರಿಂದ ಅಂತರ್ಜಾಲ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳೀಯ ಕಚೇರಿ ಹಾಗೂ ಗ್ರಾಹಕ ಸೇವಾ ಕೇಂದ್ರಕ್ಕೆ ಹಲವಾರು ಬಾರಿ ದೂರು ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಗ್ರಾಹಕ ಆಯೋಗವು ಸೇವಾ ನ್ಯೂನತೆ ಹಾಗೂ ಮಾನಸಿಕ ಯಾತನೆಗಾಗಿ ರೂ.25,000 ಹಾಗೂ ಮೊಕದ್ದಮೆ ವೆಚ್ಚವಾಗಿ ರೂ.5,000 ಸೇರಿ ಒಟ್ಟು ರೂ.30,000ನ್ನು 45 ದಿನಗಳೊಳಗೆ ಪಾವತಿಸಬೇಕೆಂದು ಬಿ.ಎಸ್.ಎನ್.ಎಲ್. ಗೆ ಆದೇಶಿಸಿದೆ.
ಮಾಸಿಕ ಶುಲ್ಕ ಸ್ವೀಕರಿಸಿದ ಅನಂತರ ನಿರಂತರ ಹಾಗೂ ಗುಣಮಟ್ಟದ ಸೇವೆ ಒದಗಿಸುವುದು ಸಂಸ್ಥೆಯ ಕರ್ತವ್ಯವಾಗಿದ್ದು, ಸೇವೆ ವ್ಯತ್ಯಯದ ಕುರಿತು ನೀಡಿದ ದೂರುಗಳನ್ನು ನಿರ್ಲಕ್ಷಿಸಿರುವುದು ಸೇವಾ ನ್ಯೂನತೆ ಎಂದು ಆಯೋಗ ತೀರ್ಪಿನಲ್ಲಿ ತಿಳಿಸಿದೆ. ನಿಗದಿತ ಅವಧಿಯಲ್ಲಿ ಪರಿಹಾರ ಪಾವತಿಸದಿದ್ದರೆ ಬಾಕಿ ಮೊತ್ತಕ್ಕೆ ವಾರ್ಷಿಕ ಶೇ.6ರ ಬಡ್ಡಿ ವಿಧಿಸಲಾಗುವುದು ಎಂದೂ ಸೂಚಿಸಲಾಗಿದೆ.