ಬೇಕರಿ ಉದ್ಯೋಗಿ ಆತ್ಮಹತ್ಯೆ
Tuesday, June 30, 2026
ಕಿನ್ನಿಗೋಳಿ: ಬೇಕರಿಯೊಂದರಲ್ಲಿ ಕಳೆದ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಮೂಲದ ರಮೇಶ್ ಪೂಜಾರಿ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಇವರು ಕಿನ್ನಿಗೋಳಿಯ ಬೇಕರಿಗೆ ಸಂಬಂಧಿಸಿದ ಕೊಠಡಿಯಲ್ಲೇ ವಾಸವಾಗಿದ್ದುಕೊಂಡು ದಶಕಗಳ ಕಾಲ ದುಡಿಯುತ್ತಿದ್ದರು ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ರಮೇಶ್ ಪೂಜಾರಿ ಅವರು ಎಂದಿನಂತೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಆತಂಕಗೊಂಡ ಸಹೋದ್ಯೋಗಿಗಳು ಮತ್ತು ಬೇಕರಿ ಸಿಬ್ಬಂದಿ ಅವರ ಕೊಠಡಿ ಹಾಗೂ ಆಸುಪಾಸಿನ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೇಕರಿ ಆವರಣದ ಬಾವಿಯ ಸಮೀಪ ರಮೇಶ್ ಅವರ ಪಾದರಕ್ಷೆಗಳು ಪತ್ತೆಯಾಗಿವೆ. ಇದರಿಂದ ತೀವ್ರ ಅನುಮಾನಗೊಂಡು ಬಾವಿಯ ಒಳಗೆ ಇಣುಕಿ ಪರಿಶೀಲಿಸಿದಾಗ ರಮೇಶ್ ಪೂಜಾರಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.