ಬಜಾಲ್ ಪರಿಸರಕ್ಕೆ ರಾತ್ರಿ 8 ಗಂಟೆಯ ನಂತರ ಬಸ್ ಪ್ರಾರಂಭಿಸುವಂತೆ ಮನವಿ
ಮಂಗಳೂರಿನಿಂದ ಬಜಾಲ್ ಪರಿಸರಕ್ಕೆ 23 ನಂಬರಿನ ಬಸ್ ಫೈಸಲ್ ನಗರ ಮತ್ತು 11ಬಿ ನಂಬರಿನ ಬಸ್ ಜಲ್ಲಿಗುಡ್ಡೆ ಮತ್ತು 9 ನಂಬರಿನ ಬಸ್ ಬಜಾಲ್ ಚರ್ಚ್ಗೆ ಹೋಗುವಂತಹ ಬಸ್ಸುಗಳಿಗೆ ಹಿಂದೆ ಆರ್.ಟಿ.ಎ. ಮೀಟಿಂಗ್ನಲ್ಲಿ ನಿಗದಿತ ಸಮಯವನ್ನು ಕೊಟ್ಟಿರುತ್ತಾರೆ. ಆದರೆ ಇತ್ತೀಚೆಗೆ ಈ 3 ಕಡೆ ಹೋಗುವಂತಹ ಬಸ್ಸುಗಳು ಮಂಗಳೂರಿನಿಂದ ರಾತ್ರಿ 8 ಗಂಟೆಯ ನಂತರ ಬರುತ್ತಿಲ್ಲ. ಮಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು ಹಾಗೂ ವಿವಿಧ ಕೆಲಸ ಮಾಡುವ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ.
ನಾವು ಕೇಳಿದರೆ ಖಾಸಗಿ ಬಸ್ಸು ಮಾಲೀಕರು ‘ಕಲೆಕ್ಷನ್ ಬರುತ್ತಿಲ್ಲ’ ಎಂದು ಉತ್ತರ ಕೊಡುತ್ತಾರೆ. ಹಾಗಾಗಿ ಬಸ್ಸು ನಿಲ್ಲಿಸಿರುತ್ತಾರೆ. ಇದನ್ನು ಗಮನಿಸಿದಾಗ ಖಾಸಗಿ ಬಸ್ಸು ಮಾಲೀಕರ ದರ್ಬಾರು ನಡೆಯುತ್ತಿದೆ. ಎಲ್ಲಾ ಮಾಲಕರು ಹೇಳಿದಂತೆ ಆರ್.ಟಿ.ಒ. ಕಚೇರಿಯನ್ನು ಬಸ್ಸು ಮಾಲಕರು ನಡೆಸುತ್ತಿದ್ದಾರೆ ಎಂದು ಎನಿಸುತ್ತದೆ.
ಮಂಗಳೂರಿನಿಂದ ರಾತ್ರಿ 10.20ಕ್ಕೆ ಇದ್ದ ಬಸ್ಸುಗಳು ಈಗ ರಾತ್ರಿ 8 ಗಂಟೆಯ ನಂತರ ಇಲ್ಲ. ಮುಂಚೆ ಇದ್ದ ಸಮಯದಲ್ಲಿ ಅಥವಾ ಬೇರೆ ಸಮಯದಲ್ಲಿ ನಮ್ಮ ಊರಿಗೆ ಬಸ್ಸುಗಳು ರಾತ್ರಿ 8 ಗಂಟೆಯ ನಂತರ ಬರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಇಲ್ಲವಾದರೆ ಇಂತಹ ಬಸ್ಸುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಥವಾ ಈ ಭಾಗಕ್ಕೆ ಸರ್ಕಾರಿ ಬಸ್ಸನ್ನು ನೇಮಿಸಬೇಕು. ಬಜಾಲ್ ಪರಿಸರದ ಸಾರ್ವಜನಿಕರ ಬವಣೆಯನ್ನು ನೀಗಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ ವಾದಿ, ಲೆನಿನ್ ವಾದಿ) ಲಿಬರೇಶನ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ದ.ಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿ.ಪಿ.ಐ.ಎಂ.ಎಲ್. ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ., ಜಿಲ್ಲಾ ಸಮಿತಿ ಸದಸ್ಯ ಅನ್ಸಾರ್ ಬಜಾಲ್, ಕಾರ್ಮಿಕ ಮುಖಂಡ ಮಹಮ್ಮದ್ ಮುಸ್ತಾಪಾ ನಿಯೋಗದಲ್ಲಿದ್ದರು.