ಉಭಯ ಸದನಗಳ ಕಲಾಪ ಡಿಜಿಟಲೀಕರಣ: ಆರು ತಿಂಗಳಲ್ಲಿ ಕಾಗದ ರಹಿತ
ಮಂಗಳೂರು: ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಕಾಗದ ರಹಿತ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ’ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಷನ್’ ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಆರು ತಿಂಗಳಲ್ಲಿ ಈ ಡಿಜಿಟಲ್ ಬದಲಾವಣೆ ಪೂರ್ಣಗೊಳ್ಳಲಿದೆ ಎಂದರು.
ವಿಧಾನಮಂಡಲದ ಡಿಜಿಟಲೀಕರಣ ಯೋಜನೆ ಸದ್ಯ ಡಿಪಿಆರ್ (ವಿವರವಾದ ಯೋಜನೆ ವರದಿ) ಹಂತದಲ್ಲಿದೆ. ಇದು ಜಾರಿಗೆ ಬಂದ ಬಳಿಕ ಉಭಯ ಸದನಗಳ ಶಾಸಕರಿಗೆ ವಿಶೇಷ ತರಬೇತಿ ನೀಡಲಾಗುವುದು.
ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ಸೌಧಕ್ಕೆ ಒಟ್ಟು 78 ಕೋ.ರೂ. ವೆಚ್ಚ. ಹಾಗೆಯೇ ವಿಧಾನ ಪರಿಷತ್ ಬೆಂಗಳೂರು ಹಾಗೂ ಬೆಳಗಾವಿ ಸದನಗಳಿಗೆ ಒಟ್ಟು 52 ಕೋ.ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಡಿಜಿಟಲ್ ಹಾಜರಾತಿ...
ವಿಧಾನಮಂಡಲದ ಐಟಿ ವಿಭಾಗದ ಮೂಲಕ ಶಾಸಕರ ಹಾಜರಾತಿಯನ್ನು ಸಂಪೂರ್ಣ ಡಿಜಿಟಲ್ ಮಾಡಲು ತೀರ್ಮಾನಿಸಲಾಗಿದೆ. ಶಾಸಕರು ಸದನದಲ್ಲಿ ತಮ್ಮ ತಮ್ಮ ಕುರ್ಚಿಗಳಲ್ಲಿ ಕುಳಿತುಕೊಂಡೇ ಡಿಜಿಟಲ್ ವ್ಯವಸ್ಥೆ ಮೂಲಕ ಹಾಜರಾತಿ ದಾಖಲಿಸಲು ಹೊಸ ತಂತ್ರಜ್ಞಾನ ನೆರವಾಗಲಿದೆ ಎಂದರು.
’ಕಿಯಾಸ್ಕ್’..
ವಿಧಾನಸೌಧಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಮಹಡಿಯಲ್ಲೂ ಅತ್ಯಾಧುನಿಕ ’ಕಿಯಾಸ್ಕ್’ (ಮಾಹಿತಿ ಪರದೆ) ಅಳವಡಿಸಲಾಗುವುದು. ಯಾವ ಕೊಠಡಿಯಲ್ಲಿ ಯಾವ ಸಚಿವರು ಲಭ್ಯವಿದ್ದಾರೆ, ಸಚಿವರ ಕಚೇರಿ ಎಲ್ಲಿದೆ ಎನ್ನುವ ನಿಖರ ಮಾಹಿತಿ ಈ ಕಿಯಾಸ್ಕ್ ಮೂಲಕ ಜನರಿಗೆ ಸಿಗಲಿದೆ ಎಂದು ಹೇಳಿದರು.