ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
Saturday, June 27, 2026
ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಇಂದು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವನ್ನು ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷ ಸಿ.ಎ ಶಾಂತರಾಮ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಅನ್ನುವುದು ಬಹಳ ಮುಖ್ಯ ಸಮಾಜದಲ್ಲಿ ಅತ್ಯುನ್ನತ ಹುದ್ದೆಗೆ ಏರಬೇಕಾದರೆ ಶಿಕ್ಷಣ ಬೇಕೇಬೇಕು. ನೀವು ಜೀವನದಲ್ಲಿ ಗುರಿ ತಲುಪುವ ಹಾದಿಯಲ್ಲಿ ಸಮಸ್ಯೆಗಳು ಬಂದರೆ ಯೋಜನೆ ಬದಲಾಯಿಸಿ ಆದರೆ ಗುರಿಯನ್ನಲ್ಲ, ಮಾತು ಹಾಗೂ ಕೆಲಸಗಳೇ ನಾಯಕನ ಸ್ಥಾನವನ್ನು ಮೇಲಕ್ಕೇರಿಸುತ್ತದೆ. ಮತ್ತೊಬ್ಬರಿಗೆ ನೋವಾಗದ ಹಾಗೆ ವರ್ತಿಸಿ ತಂಡವನ್ನು ಮುನ್ನಡೆಸುವವನೆ ನಿಜವಾದ ನಾಯಕ, ಸಿಕ್ಕ ನಾಯಕತ್ವವನ್ನು ಚೆನ್ನಾಗಿ ನಡೆಸಿಕೊಂಡು ಹೋಗಿ. ಸಮಾಜದಲ್ಲಿ ಎಲ್ಲರು ಗುರುತಿಸುವಂತ ನಾಯಕತ್ವದ ಗುಣ ನಿಮ್ಮಲ್ಲಿ ಬರಲಿ. ಎಂದು ಹೇಳಿದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಅನ್ನೋದು ಉತ್ತಮ ಅವಕಾಶ. ಅದನ್ನು ಬಳಸಿಕೊಂಡು ಶಾಲಾ ನಿಯಮಗಳಿಗೆ ಬದ್ಧರಾಗಿ, ಶಾಲಾ ಸ್ವಚ್ಛತೆಯನ್ನು ಕಾಪಾಡಿಕೊಂಡು ಶಿಕ್ಷಕರಿಗೆ ವಿಧೇಯರಾಗಿ ನಿಮ್ಮ ಕರ್ತವ್ಯದಲ್ಲಿ ಲೋಪದೋಷ ಬರದಂತೆ ಮತ್ತೊಬ್ಬರಿಗೆ ಆದರ್ಶರಾಗಿರಿ ಎಂದು ಹೇಳಿ ತಮ್ಮ ಶಾಲಾ ದಿನಗಳ ನಾಯಕತ್ವದ ಅನುಭವವನ್ನು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ ನಾಕ್ ಮಾತನಾಡಿ, ಮಕ್ಕಳು ಭವಿಷ್ಯದ ನಾಯಕರಾಗಲಿ, ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲೆ ಸುರೇಖಾ ಭಟ್ ಅವರು ಮಕ್ಕಳಿಗೆ ಪ್ರತಿಜ್ಞಾ ವಿಧಿ ನೇರವೇರಿಸಿಕೊಟ್ಟರು. ಚುನಾಯಿತ ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಸ್ವೀಕರಿಸಿದರು. ವಿದ್ಯಾರ್ಥಿ ನಾಯಕ ನಾಯಕಿಯರು ಶಾಲಾ ನಿಯಮಾವಳಿಗಳುಳ್ಳ ಕಡತಕ್ಕೆ ರುಜು ಮಾಡಿದರು ಹಾಗೂ ಚುನಾಯಿತ ವಿದ್ಯಾರ್ಥಿಗಳಿಗೆ ಪದಗ್ರಹಣ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮಕ್ಕಳು ಸಾಮೂಹಿಕವಾಗಿ ಸ್ಪೂರ್ತಿದಾಯಕ ಗೀತೆಯನ್ನು ಹಾಡಿದರು.ಸಮಾಜ ವಿಜ್ಞಾನ ಶಿಕ್ಷಕಿ ಅಕ್ಷಿತಾ ಶೆಟ್ಟಿ ವಿದ್ಯಾರ್ಥಿ ಸಂಘದ ಚುನಾವಣೆಯ ವರದಿ ವಾಚಿಸಿದರು. ವಿದ್ಯಾರ್ಥಿ ನಾಯಕ ಅಭಿದೇವ್ ಮತ್ತು ನಾಯಕಿ ದೇವ ವರ್ಣಿನಿ ಜವಾಬ್ದಾರಿ ಸ್ವೀಕಾರ ಭಾಷಣವನ್ನು ಮಾಡಿದರು. ವಿದ್ಯಾರ್ಥಿ ವೇದ್ ಪಾಟೀಲ್, ಕಾರ್ಯಕ್ರಮವನ್ನು ನಿರೂಪಿಸಿದನು. ವಿದ್ಯಾರ್ಥಿನಿ ಸನ್ನಿಧಿ ಸ್ವಾಗತ ಭಾಷಣ ಮಾಡಿದರು. ಆದ್ಯ ವಂದಿಸಿದರು.








