ಎಸ್ ಐ ಆರ್-2026: ಮೂಡುಬಿದಿರೆಯಲ್ಲಿ ಮತದಾರ ಜಾಗೃತಿ, ಮಾರ್ಗದರ್ಶನ ಹಾಗೂ ಸಾರ್ವಜನಿಕ ಸಹಾಯ ಶಿಬಿರ

ಎಸ್ ಐ ಆರ್-2026: ಮೂಡುಬಿದಿರೆಯಲ್ಲಿ ಮತದಾರ ಜಾಗೃತಿ, ಮಾರ್ಗದರ್ಶನ ಹಾಗೂ ಸಾರ್ವಜನಿಕ ಸಹಾಯ ಶಿಬಿರ


ಮೂಡುಬಿದಿರೆ: ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಘಟಕ, ನಮ್ಮ ನಾಡ ಘಟಕ (ಎನ್ ಎನ್ ಒ)ಮೂಡುಬಿದಿರೆ ಸಮುದಾಯ ಕೇಂದ್ರ ಹಾಗೂ ಸೌಹಾರ್ದ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಮತದಾರರ ಪಟ್ಟಿಯ ತೀವೃ ಪರೀಷ್ಕರಣೆ (ಎಸ್ ಐ ಆರ್)ಕುರಿತು ಸಾವ೯ಜನಿಕ ಜಾಗೃತಿ ಶಿಬಿರವು ಕೋಟೆಬಾಗಿಲು ಮೊಹಮ್ಮದೀಯ ಶಾಲೆಯಲ್ಲಿ ಭಾನುವಾರ ನಡೆಯಿತು. 


ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR-2026) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅಗತ್ಯ ಮಾರ್ಗದರ್ಶನ ಹಾಗೂ ಪ್ರಾಯೋಗಿಕ ನೆರವು ಒದಗಿಸುವ ಉದ್ದೇಶದಿಂದ 201 ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಇಲಾಖೆಯಿಂದ ನೇಮಕಗೊಂಡ ಅಧಿಕೃತ ಮಾಸ್ಟರ್ ಟ್ರೈನರ್‌  ರಾಮ್ ಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ ಬಿಎಲ್ಒ ಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿ. ಅವರು ಮೂರು ಬಾರಿ ಭೇಟಿ ನೀಡುವ ಅವಕಾಶವಿದ್ದು, ಅವರು ಬಂದಾಗ ಮೂರು ಬಾರಿಯೂ ನಿಮ್ಮ ಮನೆಗೆ ಬಂದಾಗ ಬಾಗಿಲು ಹಾಕಿದ್ದರೆ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈ ಬಿಡುವ ಸಾಧ್ಯತೆಯಿದೆ. ಹೊಸ ಮತದಾರರಿದ್ದರೆ ಈ ವಷ೯ದ ಅಕ್ಟೋಬರ್ ನಲ್ಲಿ ಸೇಪ೯ಡೆಗೆ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ ಅವರು  ಎಸ್ ಐ ಆರ್ -2026 ಪ್ರಕ್ರಿಯೆ, ಮತದಾರರ ಪರಿಶೀಲನೆ, ಎಣಿಕೆ ನಮೂನೆ (Enumeration Form) ಭರ್ತಿ, ಅಗತ್ಯ ದಾಖಲೆಗಳು ಹಾಗೂ ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಿದರು.

ಇನ್ನೋವ೯ ಟ್ರೈನರ್ ಹರ್ಷ ಎಂ. ಅವರು ಎಣಿಕೆ ನಮೂನೆ ಭರ್ತಿ ಮಾಡುವ ಪ್ರಾತ್ಯಕ್ಷಿಕೆ, ದಾಖಲೆಗಳ ಪರಿಶೀಲನೆ ಹಾಗೂ ಮತದಾರರ ಮಾಹಿತಿಯನ್ನು ಸರಿಯಾಗಿ ನವೀಕರಿಸುವ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಎರಡನೇ ಹಂತದಲ್ಲಿ ನಮ್ಮ ನಾಡ ಒಕ್ಕೂಟ (NNO) ಸಮುದಾಯ ಕೇಂದ್ರದ ವತಿಯಿಂದ ಸಾರ್ವಜನಿಕ ಸಹಾಯ ಕೇಂದ್ರವನ್ನು ತೆರೆಯಲಾಯಿತು. ಕೇಂದ್ರದಲ್ಲಿ ನಿಯೋಜಿತ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸಾರ್ವಜನಿಕರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಮತದಾರರ ಮಾಹಿತಿಯಲ್ಲಿದ್ದ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಲು ಮಾರ್ಗದರ್ಶನ ನೀಡಿದರು. ಅಗತ್ಯವಿದ್ದವರಿಗೆ ದಾಖಲೆಗಳ ತಿದ್ದುಪಡಿ, ಅರ್ಜಿ ಸಲ್ಲಿಕೆ ಹಾಗೂ ಮುಂದಿನ ಕ್ರಮಗಳ ಕುರಿತು ವೈಯಕ್ತಿಕವಾಗಿ ಸಹಾಯ ಒದಗಿಸಲಾಯಿತು.

ವಿದೇಶದಲ್ಲಿರುವ (NRI) ನಾಗರಿಕರ ಅನುಕೂಲಕ್ಕಾಗಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗಿದ್ದು, ವಾಟ್ಸಾಪ್ ಮೂಲಕವೂ ಪ್ರಶ್ನೆಗಳನ್ನು ಸ್ವೀಕರಿಸಿ ಉತ್ತರಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್ ಎನ್ ಒ ಟ್ರಸ್ಟಿ ಅಬ್ದುಲ್ ಹಮೀದ್, ಜಮಿಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ ಅಶ್ರಫ್ ಮರೋಡಿ, ಖಜಾಂಚಿ ಶೈಖ್ ಅಬ್ದುಲ್ ಗಫೂರ್, ನಮ್ಮ ನಾಡ ಒಕ್ಕೂಟ (NNO) ಮೂಡುಬಿದಿರೆ ಘಟಕದ ಕಾರ್ಯದರ್ಶಿ ರಝಾಕ್ ಮದನಿ, ಖಜಾಂಚಿ ರಿಜ್ವಾನ್ ಅಹ್ಮದ್, ಸೌಹಾರ್ದ ಮೂಡುಬಿದಿರೆ ಅಧ್ಯಕ್ಷ ಮೊಹಮ್ಮದ್ ಶರೀಫ್,  ಶಾಲಾ ಸಮಿತಿಯ ಅಧ್ಯಕ್ಷ ಮಕ್ಬೂಲ್ ಹುಸೈನ್, ಕಾರ್ಯದರ್ಶಿ ಪಾರ್ಕರ್ ಶರೀಫ್ ಸಾಹೇಬ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 ಜಮಿಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಹಾಗೂ ನಮ್ಮ ನಾಡ ಒಕ್ಕೂಟ (NNO) ಮೂಡುಬಿದಿರೆ ಘಟಕದ ಅಧ್ಯಕ್ಷ ಶೇಖ್ ನೂರುದ್ದೀನ್ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article