ಕೋಟೆಕಾರು ಸಹಕಾರಿ ಸಂಘದ ದರೋಡೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ
Sunday, June 7, 2026
ಉಳ್ಳಾಲ: ಇಲ್ಲಿನ ಕೆ.ಸಿ. ರೋಡ್ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ ಬ್ಯಾಂಕ್ನಲ್ಲಿ 2025 ಜನವರಿ 17 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಈತ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ತಲೆಮರೆಸಿಕೊಂಡಿದ್ದ ಸೂರತ್ ನಿವಾಸಿ ಆರೋಪಿ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್ ಸಿಂಗ್ ಯಾನೆ ಮನೋಜ್ ಜೀತ್ ಲಾಲ್ ವರ್ಮ ಯಾನೆ ಧರ್ಮ್ ಯಾನೆ ಮಾಸ್ಟರ್ ಯಾನೆ ಕಳ್ಳು (34) ಎಂಬಾತನನ್ನು ಮೇ 11ರಂದು ಮಹಾರಾಷ್ಟ್ರ ರಾಜ್ಯದ ಮುಂಬೈಯ ಪನ್ವೇಲಿ ರೈಲ್ವೆ ಸ್ಟೇಷನ್ ಬಳಿ ವಶಕ್ಕೆ ಪಡೆದು, ಮೇ.12 ರಂದು ಉಳ್ಳಾಲ ಪೊಲೀಸ್ ಠಾಣೆಗೆ ಕರೆದುಕಂಡು ಬಂದು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಈ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಿ ಮೇ.22 ರಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.