ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ: ಸಚಿವ ಯು.ಟಿ. ಖಾದರ್

ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ: ಸಚಿವ ಯು.ಟಿ. ಖಾದರ್


ಉಳ್ಳಾಲ: ಐದು ಬಾರಿ ಶಾಸಕನಾಗುವ ಜೊತೆಗೆ ನಾಲ್ಕು ಇಲಾಖೆಯ ಸಚಿವನಾಗಿ ವಿರೋಧ ಪಕ್ಷದ ಉಪನಾಯಕನಾಗಿ, ಸ್ಪೀಕರ್ ಆದ ಬಳಿಕ ಆರೋಗ್ಯ ಸಚಿವನಾಗುವ ಅವಕಾಶ ಸಿಕ್ಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಕಾರಣ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಸಿಎಂ ಡಿಕೆಶಿ ಸಂಪುಟದಲ್ಲಿ ಆರೋಗ್ಯ ಸಚಿವನಾಗಿ ಅಧಿಕಾರ ಪಡೆದ ಬಳಿಕ ಪ್ರಥಮ ಬಾರಿಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮ ಜೊತೆ ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ ಆಗಿದ್ದು, ಕ್ಷೇತ್ರದ ಜನರು ತಲೆ ತಗ್ಗಿಸಿ ನಡೆಯದಂತೆ ಮಾಡುವುದು ಅಧಿಕಾರ ಪಡೆದ ನನ್ನ ಮೊದಲ ಜವಾಬ್ದಾರಿ ಆಗಿದೆ. ಆರೋಗ್ಯ ಸಚಿವನಾಗಿ ಏನೆಲ್ಲ ಕೆಲಸ ಮಾಡಲು ಆಗುತ್ತದೆಯೋ ಅದನ್ನು ಮೊದಲು ಕ್ಷೇತ್ರದಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈವರೆಗೆ ನನಗೆ ಸಿಕ್ಕಿದ ಪದವಿ ಅದು ಕ್ಷೇತ್ರದ ಜನಸಾಮಾನ್ಯರಿಗೆ ಸಿಕ್ಕಿದ ಗೌರವ ಆಗಿದೆ. ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಕೆಲಸ ಮಾಡುವ ಜವಾಬ್ದಾರಿ ನನ್ನದು. ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕೊರತೆ ಇದ್ದಲ್ಲಿ ಶೀಘ್ರ ಇತ್ಯರ್ಥ ಪಡಿಸಲಾಗುವುದು ಎಂದರು.

ಆರೋಗ್ಯ ಸಚಿವ ದರ್ಗಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಅವರಿಗೆ ದರ್ಗಾ ವತಿಯಿಂದ ಸನ್ಮಾನಿಸಲಾಯಿತು.

ದರ್ಗಾ ಕಾರ್ಯಕ್ರಮ ಮುಗಿದ ಬಳಿಕ ಭಗವತಿ ದೇವಸ್ಥಾನ, ಸೆಬೆಸ್ಟಿಯನ್ ಚರ್ಚ್‌ಗೆ ಭೇಟಿ ನೀಡಿದರು.

ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಕಣಚೂರು ಮೋನು, ಅಲ್ತಾಫ್ ಹಳೆಕೋಟೆ, ಅಬ್ದುಲ್ ಖಾದರ್ ಕೋಡಿ, ಅಶ್ರಫ್ ಹಾಜಿ ಕೋಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಮಾಜಿ ಕೌನ್ಸಿಲರ್ ಇಸ್ಮಾಯಿಲ್, ಯೂಸುಫ್ ಬಾವ, ರಝಿಯ ಇಬ್ರಾಹೀಮ್, ಸದಾಶಿವ ಉಳ್ಳಾಲ್, ಮನ್ಸೂರ್ ಮಂಚಿಲ, ನಗರಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಗ್ಯಾರಂಟಿ ಯೋಜನೆ ಉಳ್ಳಾಲ ತಾಲೂಕು ಅಧ್ಯಕ್ಷ ರಫೀಕ್ ಅಂಬ್ಲಮೊಗರು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article