ಭಗ್ನ ಪ್ರೇಮವೇ ವಿದ್ಯಾರ್ಥಿನಿಯ ಕೊಲೆಗೆ ಯತ್ನ ಪೊಲೀಸರ ತನಿಖೆಯಲ್ಲಿ ಬಯಲು, ಆರೋಪಿಗೆ ನ್ಯಾಯಾಂಗ ಬಂಧನ
ಮೋಂತಿಮಾರು ಪಡ್ಪು ನಿವಾಸಿ ಜವ್ವಾರ್ (28) ಕಳೆದ ನಾಲ್ಕು ವರ್ಷದಿಂದ ಈ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ, ಘಟನೆ ನಡೆದ ಬಸ್ ತಂಗುದಾಣದಿಂದ ಅನತಿ ದೂರದಲ್ಲಿ ಈತ ಅಂಗಡಿಯನ್ನು ಹೊಂದಿದ್ದು,ಬಾಲಕಿ ಸಾಮಾನು ಖರೀದಿಗೆಂದು ಅಂಗಡಿಗೆ ಬರುತ್ತಿದ್ದಳೆನ್ನಲಾಗಿದೆ, ಆಗ ಇವರೊಳಗೆ ಉಂಟಾದ ಪರಿಚಯ ಪ್ರೇಮಾಂಕುರವಾಗಿ ಬೆಳೆದಿತ್ತು ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಜವ್ವಾರ್ ಆಕೆಯನ್ನು ವಿವಾಹವಾಗುವ ಬಗ್ಗೆಯು ಮಾತು ಕೊಟ್ಟಿದ್ದ ಎಂದು ತನಿಖೆಯ ವೇಳೆ ಈತ ಬಾಯಿಬಿಟ್ಟಿದ್ದು, ಕಳೆದ ಹತ್ತು ದಿನಗಳ ಹಿಂದೆ ಕಾರಣಾಂತರಗಳಿಂದ ವಿದ್ಯಾರ್ಥಿನಿ ಅತನ ಪ್ರೇಮವನ್ನು ನಿರಾಕರಿಸಿದ್ದು, ಅತನ ಮೊಬೈಲ್ ಕರೆಯನ್ನು ಕೂಡ ತಡೆಹಿಡಿದಿಟ್ಟಿದ್ದಳು ಎಂದು ತಿಳಿದು ಬಂದಿದೆ.
ಇದರಿಂದ ಕುಪಿತನಾಗಿದ್ದ ಜವ್ವಾರ್ ವಿದ್ಯಾರ್ಥಿನಿಯನ್ನು ಕೊಲೆಗೆ ಸಂಚು ರೂಪಿಸಿ ಒಂಟಿಯಾಗಿ ಸಿಗಲು ಕಾಯುತ್ತಿದ್ದ ಸೋಮವಾರ ವಿದ್ಯಾರ್ಥಿನಿ ಒಬ್ಬಂಟಿಯಾಗಿ ಮೋಂತಿಮಾರಿನ ಬಸ್ ತಂಗುದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದುದನ್ನು ಗಮನಿಸಿ ಅಂಗಡಿಯಿಂದ ಚಾಕು ಹಿಡಿದುಕೊಂಡು ತನ್ನ ದ್ವಿಚಕ್ರವಾಹನದಲ್ಲಿ ನೇರವಾಗಿ ತಂಗುದಾಣದತ್ತ ಬಂದು ಒಂಟಿಯಾಗಿ ನಿಂತಿದ್ದ ವಿದ್ಯಾರ್ಥಿನಿಯ ಕತ್ತಿನ ಭಾಗಕ್ಕೆ ಚಾಕು ಬೀಸಿದ್ದಾನೆ.
ಅಪಾಯದ ಅರಿವಾದ ಬಾಲಕಿ ತನ್ನ ಕೈಯನ್ನು ಅಡ್ಡ ತಂದಾಗ ಕೈ, ತಲೆಯ ಭಾಗ ಮತ್ತು ಕಾಲಿಗೆ ಗಾಯವಾಗಿದೆ. ಬಾಲಕಿ ಬೊಬ್ಬಿಟ್ಟಾಗ ಚಾಕುವನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದ.
ಘಟನೆಯ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ತನ್ನ ಮೇಲೆ ಎರಗಬಹುದೆಂಬ ಅಪಾಯದ ಸುಳಿವು ಅರಿತ ಜವ್ವಾರ್ ನೇರವಾಗಿ ಬಂಟ್ಚಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಈ ಘಟನೆ ಸ್ಥಳೀಯವಾಗಿ ಒಂದಷ್ಟು ಹೊತ್ತು ಜನರನ್ನು ಭಯಭೀತರನ್ನಾಗಿಸಿತ್ತು.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸೂಕ್ತ ಬಂದೋಬಸ್ತು ಎರ್ಪಡಿಸಿದ್ದರು.
ಇದೀಗ ಆರೋಪಿಯನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿ ಮಂಗಳವಾರ ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾಲಕೆ ಗಾಯಾಳು ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.