ಜ್ಯೋತಿಷ್ಯರ ಹೆಸರು, ಭಾವಚಿತ್ರ ಬಳಸಿ ಅವಹೇಳನ, ಠಾಣೆಗೆ ದೂರು: ಹಿ.ಜಾ.ವೇ. ಖಂಡನೆ
ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ತನ್ನ ಬಳಿ ಬರುವಮತ ಎಲ್ಲರಿಗೂ ಸಮಾನವಾಗಿ ಜ್ಯೋತಿಷ್ಯ ಸಲಹೆಗಳನ್ನು ಸೇವಾ ಭಾವನೆಯಿಂದ ನೀಡುತ್ತಿದ್ದು, ವಿವಿಧ ಸಮುದಾಯಗಳಿಗೆ ಸೇರಿದ ನೂರಾರು ಮಂದಿ ತಮ್ಮ ವೈಯಕ್ತಿಕ ಸಮಸ್ಯೆಗಳಿಗೂ ಸಂಪರ್ಕಿಸಿದಾಗ ಸೂಕ್ತ ಪರಿಹಾರವನ್ನು ನೀಡುತ್ತಿದ್ದು, ಸಮಾಜದಲ್ಲಿ ಶಂತಿ ಕದಡುವ ದುರುದ್ದೇಶದಿಂದ ತಮ್ಮ ಭಾವಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವಮಾನಕರ ಸಂದೇಶವನ್ನು ಹರಿಬಿಡಲಾಗಿದೆ ಎಂದು ಅವರು ಅನಿಲ್ ಪಂಡಿತ್ ಅವರು ರೂರಿನಲ್ಲಿ ಆರೋಪಿಸಿದ್ದಾರೆ.
ಆ ಸಂದೇಶದಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪ ಮತ್ತು ವೃತ್ತಿಗೆ ಧಕ್ಕೆತರುವ ರೀತಿಯ ಹೇಳಿಕೆಗಳನ್ನು ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು,
ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದು, ದೂರು ಸ್ವೀಕರಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಸೂಕ್ತ ಕ್ರಮದ ಭರವೆಸೆಯಿತ್ತಿದ್ದಾರೆ.
ಈ ಸಂದರ್ಭದಲ್ಲಿ ಅನಿಲ್ ಪಂಡಿತ್ ಅವರ ಜೊತೆ ಹಿಂದೂ ಸಂಘಟನೆಗಳ ಪ್ರಮುಖರಾದ ಭಕ್ತಿಭೂಷಣ್ ದಾಸ್ ಪ್ರಭುಜಿ, ತಾರಾನಾಥ ಕೊಟ್ಟಾರಿ, ಅಶೋಕ್ ಶೆಟ್ಟಿ ಸರಪಾಡಿ, ದಾಮೋದರ ನೆತ್ತರಕೆರೆ, ಪ್ರಶಾಂತ್ ಕೆಂಪುಗುಡ್ಡೆ, ಸಂತೋಷ್ ಸರಪಾಡಿ, ರಮಿತಾಸೂರ್ಯವಂಶಿ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಹಿ.ಜಾ.ವೇ. ಖಂಡನೆ:
ಬಂಟ್ವಾಳದ ಖ್ಯಾತ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರಾದ ಅನಿಲ್ ಪಂಡಿತ್ ಬ್ರಹ್ಮರಕೂಟ್ಟು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರ ಪೋಸ್ಟ್ ಮಾಡಿರುವುದನ್ನು ಹಿಂದೂ ಜಾಗರಣ ಮಂಗಳೂರು ಗ್ರಾಮಾಂತರ ಜಿಲ್ಲೆ ತೀವ್ರವಾಗಿ ಖಂಡಿಸಿದೆ.
ಅನಿಲ್ ಪಂಡಿತ್ ಅವರು ಹಲವು ವರ್ಷಗಳಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವಾ ಮನೋಭಾವದಿಂದ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ, ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ. ಆಧ್ಯಾತ್ಮಿಕ ಚಿಂತಕರಾಗಿರುವ ಅವರು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರ ಧಾರ್ಮಿಕ ಕಾರ್ಯಗಳಿಂದ ವಿಚಲಿತರಾಗಿರುವ ಕೆಲ ಕಿಡಿಗೇಡಿಗಳು ಅವರ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹಿ.ಜಾ.ವೇ. ಆರೋಪಿಸಿದೆ.
ಕೆಲ ಅನ್ಯಮತೀಯ ವ್ಯಕ್ತಿಗಳು ಅವರ ವಿರುದ್ಧ ಮಾನಹಾನಿಕರ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಕಂಡುಬಂದಿದ್ದು, ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಇಲ್ಲಿದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.