ಕೆಂಪುಕಲ್ಲು ಸಾಗಾಟದ ಲಾರಿ ಪಲ್ಟಿ: ಓರ್ವ ಕಾರ್ಮಿಕನ ಮೃತ್ಯು, ಇಬ್ಬರಿಗೆ ಗಾಯ
Wednesday, July 15, 2026
ಬಂಟ್ವಾಳ: ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಬಳಿಯ ಅತ್ತಳಿಕೆ ಎಂಬಲ್ಲಿ ಬುಧವಾರ ಸಂಭವಿಸಿದ್ದು, ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರನ್ನು ಕಾವಳಪಡೂರು ಗ್ರಾಮದ ಕೊಲೆಂಜಿಕೋಡಿ ನಿವಾಸಿ ಒಬಯ್ಯ ಪೂಜಾರಿಯವರ ಪತ್ರ ಪ್ರಮೋದ್ (42) ಗುರುತಿಸಲಾಗಿದ್ದು, ಚಾಲಕ ಸುನಿಲ್ ಮತ್ತು ಇನ್ನೊರ್ವ ಕಾರ್ಮಿಕ ವಿಜಯ್ ಎಂಬವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಕಲ್ಲಿನ ಕೋರೆಯಿಂದ ಕೆಂಪುಕಲ್ಲನ್ನು ಹೇರಿಕೊಂಡು ಬರುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯ ಚಕ್ರಗಳು ಮೇಲ್ಮುಖವಾಗಿ ಮಗುಚಿ ಬಿದ್ದಿದ್ದು, ಪರಿಣಾಮ ಲಾರೊಯಡಿ ಸಿಲುಕಿದ್ದ ಪ್ರಮೋದ್ ಅವರನ್ನು ಜೆಸಿಬಿ ಯಂತ್ರದ ಸಹಾಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ ಗಂಭೀರ ಸ್ವರೂಪದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರಮೋದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮೃತರು ತಾಯಿ, ಪತ್ನಿ, ಪತ್ರಿ ಹಾಗೂ ಸಹೋದರನನ್ನು ಅಗಲಿದ್ದಾರೆ.