‘ಆರ್ಎಸ್ಎಸ್ ರಶೀದಿ ನೀಡದೆ ದೇಣಿಗೆ ಸಂಗ್ರಹಿಸುತ್ತಿದೆ’: ಅಮಲ ರಾಮಚಂದ್ರ
ಬೆಳ್ತಂಗಡಿ: ‘ದೇಶದಲ್ಲಿ ನೊಂದಣಿಯಾಗದೆ ಇರುವ ಆರ್ಎಸ್ಎಸ್ ದೊಡ್ಡ ಸಂಸ್ಥೆಯಾಗಿದ್ದು, ರಶೀದಿ ನೀಡದೆ ದೇಣಿಗೆ ಸಂಗ್ರಹಿಸುತ್ತಿದೆ. ಅದು ದೇಣಿಗೆ ಹಣದ ಲೆಕ್ಕಾಚಾರ ನೀಡದೆ ಇರುವ ಸಂಸ್ಥೆಯೂ ಆಗಿದೆ’ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ವರ್ಷ ಗುರುಕಾಣಿಕೆಯ ಹೆಸರಿನಲ್ಲಿ ಜನರಿಂದ ಕಾನೂನಿನ ಮಾನ್ಯತೆಯಿಲ್ಲದೆ ಸಂಗ್ರಹಿಸುತ್ತಿರುವ ಕೋಟಿಗಟ್ಟಲೆ ರೂಪಾಯಿ ದೇಣಿಗೆಗಳಿಗೆ ಯಾವುದೇ ರೀತಿಯ ಲೆಕ್ಕಪತ್ರ ನೀಡದೆ, ಪಾರದರ್ಶಕತೆ ಪ್ರದರ್ಶಿಸದೆ, ಪ್ರಶ್ನಿಸಿದವನನ್ನೇ ‘ನನ್ನನ್ನು ಪ್ರಶ್ನಿಸುವುದಕ್ಕೆ ನೀನು ಯಾರು’ ಎಂದು ಕೇಳುತ್ತಿದೆ ಎಂದರು.
‘ಆರ್ಎಸ್ಎಸ್ಗೆ ನೂರು ವರ್ಷವಾದರೂ ಇಂದಿನವರೆಗೆ ಸಂಸ್ಥೆಗೆ ಸರಿಯಾದ ವಿಳಾಸವೇ ಇಲ್ಲ. ಆರ್.ಎಸ್.ಎಸ್. ಎಂತೆಂಥ ದೇಶಭಕ್ತರನ್ನು ನಿರ್ಮಾಣ ಮಾಡಿದೆ ಎಂಬುದಕ್ಕೆ ಈಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ಭಕ್ತರ ಕಾಣಿಕೆಯ ಕೋಟ್ಯಂತರ ರೂಪಾಯಿಗಳ ಹಗರಣ ಸ್ಪಷ್ಟ ನಿದರ್ಶನವಾಗಿದೆ’ ಎಂದು ಹೇಳಿದರು.
‘ರಾಜ್ಯದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲಿ ನಡೆದ ಅಡ್ಡ ಮತದಾನ ವಿಚಾರಕ್ಕೆ ಅಣೆ ಪ್ರಮಾಣ ಪ್ರಹಸನ ನಡೆದಿದೆ. ಪವಿತ್ರ ಕ್ಷೇತ್ರದಲ್ಲಿ ರಾಜಕೀಯದ ಅಣೆಪ್ರಮಾಣದ ಹೇಯ ಕೃತ್ಯವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮಾಡಿದ್ದು ಇದಕ್ಕೆ ಶಾಸಕ ಹರೀಶ್ ಪೂಂಜ ಅವರನ್ನು ಪುಸಲಾಯಿಸಿ ಸಲಹೆ ನೀಡಿದ್ದಾರೆ’ ಎಂದು ದೂಷಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಬೆಳ್ತಂಗಡಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಗೌಡ ಸವಣಾಲು ಹಾಗೂ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.