ಮಾದಕವಸ್ತು ಮಾರಾಟ ಯತ್ನ ಪ್ರಕರಣ: ಎಂಡಿಎಂಎ ಸಹಿತ ಆರೋಪಿ ಸೆರೆ
ಬಂಧಿತ ಆರೋಪಿಯನ್ನು ಕುವೆಟ್ಟು ಗ್ರಾಮದ ಅನ್ಸಾರ್(21) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ಜುಲೈ 29ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಿಲಿಚಂಡಿಕಲ್ಲು ಪ್ರದೇಶದ ಖಾಸಗಿ ಕಟ್ಟಡದ ಮುಂಭಾಗದಲ್ಲಿ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸ್ ಜೀಪನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಹಿಡಿದು ವಿಚಾರಣೆ ನಡೆಸಿದಾಗ ತನ್ನ ಹೆಸರು ಅನ್ಸಾರ್ ಎಂದು ತಿಳಿಸಿದ್ದು, ಬಳಿಕ ಮತ್ತಷ್ಟು ವಿಚಾರಣೆ ನಡೆಸಿದಾಗ ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ (31) ಎಂಬಾತನಿಗೆ 20 ಸಾವಿರ ರೂ. ಮುಂಗಡ ಹಣ ನೀಡಿ ಗಾಂಜಾ ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಹಮ್ಜತ್ ಕರಾರ್ ಕಾರಿನಲ್ಲಿ ಬಂದು 500 ಗ್ರಾಂ ಗಾಂಜಾವನ್ನು ನೀಡಿದ್ದು, ಪೊಲೀಸರು ಬರುತ್ತಿರುವುದನ್ನು ಕಂಡು ಕಾರನ್ನು ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ. ಬಳಿಕ ಕಾರನ್ನು ತಪಾಸಣೆ ನಡೆಸಿದಾಗ ಕಾರಿನೊಳಗೆ 7.60 ಲಕ್ಷ ರೂ. ಮೌಲ್ಯದ ಎಮ್.ಡಿ.ಎಮ್.ಎ ಪತ್ತೆಯಾಗಿದೆ.
ಆರೋಪಿ ಅನ್ಸಾರ್ ನನ್ನು ತಪಾಸಣೆ ಮಾಡಿದಾಗ ಆತನ ಬಳಿ ಸುಮಾರು 1,498 ರೂ. ಮೌಲ್ಯದ 20 ಗ್ರಾಂ ಗಾಂಜಾ, 30 ಸಾವಿರ ಮೌಲ್ಯದ ಒಂದು ಮೊಬೈಲ್, 200 ರೂಪಾಯಿ ಮೌಲ್ಯದ ಇತರ ವಸ್ತುಗಳು ಪತ್ತೆಯಾಗಿದೆ.
ಪೊಲೀಸರು ಗಾಂಜಾ, ಎಂಡಿಎಂಎ, ಕಾರು, ಆಟೋ ರಿಕ್ಷಾ, ಮೊಬೈಲ್ ಫೋನ್ ಸೇರಿ ಒಟ್ಟು 15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಹಾಗೂ 27Aರ ಅಡಿಯಲ್ಲಿ ಹಮ್ಜತ್ ಕರಾರ್ ಮತ್ತು ಅನ್ಸಾರ್ ವಿರುದ್ಧ ಜು.29 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಅನ್ಸಾರ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮನೆಗೆ ಜು.30 ರಂದು ಸಂಜೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.