ಉಡುಪಿ ಶಾಸಕ ಯಶ್ಪಾಲ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು
Friday, July 31, 2026
ಮೂಡುಬಿದಿರೆ: ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ಅವರು ಉಡುಪಿ ನಗರ ಬಸ್ ನಿಲ್ದಾಣದ ಸಮೀಪದಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ನೀಟ್ ಹೋರಾಟ ಮಾಡಿದ ವಿದ್ಯಾರ್ಥಿಗಳ ವಿರುದ್ಧವಾಗಿ ನಡೆದ ಬಿಜೆಪಿ ಪಕ್ಷದ ಪ್ರತಿಭಟನೆಯಲ್ಲಿ ಮಾತನಾಡುವಾಗ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ನಿಂದನೆ ಮಾಡಿ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ.
ರಾಹುಲ್ ಗಾಂಧಿಯವರ ವಂಶವನ್ನು ನಿರ್ಣಾಮ ಮಾಡುವುದಾಗಿ ಹೇಳಿದ್ದು, ರಾಹುಲ್ ಗಾಂಧಿಯವರಿಗೆ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ.
ಇದು ಜನರ ನಡುವೆ ದ್ವೇಷವನ್ನು ಹುಟ್ಟಿಸುವ ಹುನ್ನಾರವಾಗಿದೆ ಮತ್ತ ಬಿಜೆಪಿ ಕಾರ್ಯಕರ್ತರಿಗೆ ಗುಂಪು ಗಲಭೆಗೆ ಪ್ರಚೋದನೆ ನೀಡಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಕೃತ್ಯವಾಗಿರುತ್ತದೆ ಎಂದು ಆಪಾದಿಸಿ ಶಾಸಕರ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ಪುರಸಭಾ ಮಾಜಿ ಸದಸ್ಯರಾದ ಸುರೇಶ್ ಪ್ರಭು, ಪುರಂದರ ದೇವಾಡಿಗ, ಕೊರಗಪ್ಪ, ಸುರೇಶ್ ಕೋಟ್ಯಾನ್, ಜೋಸ್ಸಿ ಮಿನೇಜಸ್, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ, ಪ್ರಮುಖರಾದ ಕುಮಾರ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.