ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ
ಕಾರ್ಕಳ ಮಾರ್ಕೆಟ್ ರಸ್ತೆಯಿಂದ ಪೆರ್ವಾಜೆ ಕಲ್ಲೊಟ್ಟೆ ಮೂಲಕ ಬಂಡಿಮಠ ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಮಾತ್ರವಲ್ಲ ಜನಸಂಚಾರಕ್ಕೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರ್ಕಳದಿಂದ ಉಡುಪಿ, ಹೆಬ್ರಿ ಕಡೆಗೆ ಹೋಗುವ ಬಸ್ಸುಗಳಿಗೆ ಮುಖ್ಯ ರಸ್ತೆ ಇದಾಗಿದ್ದು, ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿರುವ ಈ ರಸ್ತೆಯಲ್ಲಿ ಘನವಾಹನಗಳು ಎದ್ದೋ ಬಿದ್ದು ರಸ್ತೆ ಗುಂಡಿಗಳಿಂದ ಹೇಗೋ ಪ್ರಯಾಸದಿಂದ ಬೇರೆ ಮಾರ್ಗವಿಲ್ಲದೆ ಓಡಾಡಿದರೆ ಲಘು ವಾಹನಗಳು, ತ್ರಿಚಕ್ರ, ಹಾಗೂ ದ್ವಿಚಕ್ರ ವಾಹನಗಳು ಓಡಾಡಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಸುಮಾರು ಒಂದು ವರ್ಷಗಳಿಂದ ಈ ರಸ್ತೆಯಲ್ಲಿ ಅಮೃತ ಯೋಜನೆಯಡಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು ಕಾಮಗಾರಿ ಸಂದರ್ಭದಲ್ಲಿ ಮುಖ್ಯ ಕೊಳವೆಗಾಗಿ ರಸ್ತೆಯನ್ನು ಅಗೆದು ನೀರಿನ ಕೊಳವೆಯನ್ನು ಅಳವಡಿಸಿ ಮಣ್ಣು ಮುಚ್ಚಲಾಗಿತ್ತು ಸಮರ್ಪಕವಾಗಿ ಕೆಲಸ ನಡೆಸದ ಕಾರಣ ಘನ ವಾಹನಗಳು ಸಂಚರಿಸುವಾಗ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಅಳವಡಿಸಿದ ಪೈಪ್ ಲೈನ್ ಗಳು ಪದೇ ಪದೇ ಸೋರುತ್ತಿದ್ದು ಮತ್ತೆ ಮತ್ತೆ ರಿಪೇರಿ ಕಾಮಗಾರಿ ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ರಸ್ತೆ ಬದಿಯ ಚರಂಡಿಗೆ ಕಟ್ಟಲಾಗಿದ್ದ ಮೋರಿಯನ್ನು ಕೂಡ ಅಗೆದು ಹಾಕಿದ್ದು ಪೈಪ್ ಲೈನ್ ಕಾಮಗಾರಿ ಕೈಗೆತ್ತಿಕೊಂಡ ಕಾಂಟ್ರಾಕ್ಟ್ದಾರರಾಗಲಿ, ಕೆಲಸದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದೆ ಮಳೆ ನೀರು ಕೂಡ ರಸ್ತೆಯಲ್ಲಿ ಹರಿದು ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಸಾರ್ವಜನಿಕ ರಸ್ತೆಯನ್ನು ಸರಿಪಡಿಸದೆ ಮೋರಿಗಳನ್ನು ಕೂಡ ಅಗೆದು ಹಾಕಿರುವ ಕೆಲಸಗಾರರು ಅಮೃತ್ ಯೋಜನೆಯ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದರೂ ಪುರಸಭೆ ಅಧಿಕಾರಿಗಳು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ತಮಗೆ ಸಂಬಂಧವೆ ಇಲ್ಲವೆಂಬಂತೆ ನಿರ್ಲಕ್ಷ ತೋರುತ್ತಿವುದು ಸಾರ್ವಜನಿಕರನ್ನು ರಸ್ತೆಗಿಳಿಯುವಂತೆ ಮಾಡಿದೆ.
ಅದೆಷ್ಟು ವಿದ್ಯಾರ್ಥಿಗಳು, ಮಹಿಳೆಯರು ದ್ವಿಚಕ್ರ ವಾಹನ ಚಾಲಕರು ಈ ರಸ್ತೆ ಯಲ್ಲಿ ಬಿದ್ದು ಆಸ್ಪತ್ರೆ ದಾಖಲಾದ ಉದಾಹರಣೆ ಇದೆ ಆದರೂ ಕಣ್ಮುಚ್ಚಿ ಕುಳಿತಿರುವ ಜನಪ್ರತಿನಿದಿಗಳು, ಅಧಿಕಾರಿಗಳ ವಿರುದ್ದ ಜನಸಾಮಾನ್ಯರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಾದರೂ ಕಣ್ಮುಚ್ಚಿ ಕುಳಿತಿರುವ ಜನಪ್ರತಿನಿದಿಗಳು, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಕಾರ್ಕಳದಲ್ಲಿ ತೀವ್ರ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವ ಮನೋಸ್ಥಿತಿ ಹೊಂದಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ.