ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿ: ರಾತ್ರಿ 8ರ ತನಕ ಸೇವೆ ವಿಸ್ತರಣೆ
ಮಂಗಳೂರು: ಮಂಗಳೂರು ವಿಭಾಗದ ಅಂಚೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಜು.13ರಿಂದ ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ (ಪಾಂಡೇಶ್ವರದಲ್ಲಿರುವ ಫೋರಂ ಫಿಝಾ ಮಾಲ್ ಎದುರು) ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸೇವೆ ಲಭ್ಯವಿದೆ.
ಈ ಅವಧಿಯಲ್ಲಿ ಸ್ಪೀಡ್ಪೋಸ್ಟ್/ಪಾರ್ಸೆಲ್, ದೇಶೀಯ ಮತ್ತು ಅಂತರರಾಷ್ಟ್ರೀಯ ಪಾರ್ಸೆಲ್ ಬುಕ್ಕಿಂಗ್, ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳು ಹಾಗೂ ಅಂಚೆ ಉಳಿತಾಯ ಬ್ಯಾಂಕ್ ಸೇವೆಗಳು ಲಭ್ಯವಿರುತ್ತವೆ.
ಗ್ರಾಹಕರು ಸುಕನ್ಯಾ ಸಮೃದ್ಧಿ ಖಾತೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ, ಮಾಸಿಕ ಆದಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯನಿಧಿ ಹಾಗೂ ಪ್ರಧಾನಮಂತ್ರಿ ಜನಸುರಕ್ಷಾ ಯೋಜನೆಗಳ ಸಹಿತ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಅಂಚೆ ಬ್ಯಾಂಕಿಂಗ್ನ ಈ ವಿಸ್ತರಿತ ಸಂಜೆ ಸೇವೆಯನ್ನು ಪಡೆಯಲು SAS/MPKB ಏಜೆಂಟ್ಗಳಿಗೆ ಅವಕಾಶವಿಲ್ಲ.
ಅಂತರ ರಾಷ್ಟ್ರೀಯ ಪಾರ್ಸೆಲ್ ಬುಕ್ಕಿಂಗ್ಗಾಗಿ ವಿಶೇಷ ಅಂತರ ರಾಷ್ಟ್ರೀಯ ಬುಕ್ಕಿಂಗ್ ಕೌಂಟರ್ ಆರಂಭಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿ ವಿದೇಶಗಳಿಗೆ ಪಾರ್ಸೆಲ್ಗಳನ್ನು ಕಳುಹಿಸಲು ಅಗತ್ಯವಿರುವ ಕಸ್ಟಮ್ಸ್ ದಾಖಲೆಗಳ ಬಗ್ಗೆ ಗ್ರಾಹಕರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅಲ್ಲದೆ ರಫ್ತುದಾರರು ಹಾಗೂ ಆನ್ಲೈನ್ ಮಾರಾಟಗಾರರು ರಫ್ತು ಪಾರ್ಸೆಲ್ಗಳು ಮತ್ತು ಇ-ಕಾಮರ್ಸ್ ಸಾಗಣೆಗಳನ್ನು ವಿಶ್ವದಾದ್ಯಂತದ ಗ್ರಾಹಕರಿಗೆ ಬುಕ್ಕಿಂಗ್ ಹಾಗೂ ರವಾನಿಸಲು ಡಾಕ್ಫಾರ್ ನಿರ್ಯಾತ ಕೇಂದ್ರ (DNK) ಸೇವೆಯನ್ನು ಬಳಸಿಕೊಳ್ಳಬಹುದು. ಪಾರ್ಸೆಲ್ಗಳನ್ನು ಸುರಕ್ಷಿತವಾಗಿ ಕಳುಹಿಸಲು ಅಂಚೆ ಕಚೇರಿಯಲ್ಲಿ ವಿಶೇಷ ಪಾರ್ಸೆಲ್ ಪ್ಯಾಕೇಜಿಂಗ್ ಘಟಕ ಕೂಡ ಲಭ್ಯವಿದೆ.
ಉದ್ಯೋಗಸ್ಥರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಪ್ರತೀ ರವಿವಾರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಆಧಾರ್ ಸೇವೆಗಳು, ಸ್ಪೀಡ್ ಪೋಸ್ಟ್ ಹಾಗೂ ಪಾರ್ಸೆಲ್ ಬುಕ್ಕಿಂಗ್ ಸೇವೆಗಳು ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಲಭ್ಯವಿರುತ್ತವೆ ಎಂದು ಹಿರಿಯ ಅಂಚೆ ಪಾಲಕ ಲೋಕನಾಥ ಎಂ. ಮತ್ತು ಹಿರಿಯ ಅಂಚೆ ಅಧೀಕ್ಷಕ ಜೋಸೆಫ್ ರಾಡ್ರಿಗಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.