ಪೊಲೀಸರಿಂದ ಸಮಯೋಜಿತ ಕ್ರಮ: ಮುಸ್ಲಿಂ ಪರಿಷತ್ ಶ್ಲಾಘನೆ
Monday, July 13, 2026
ಪುತ್ತೂರು: ತಾಲೂಕಿನ ಪುರುಷರಕಟ್ಟೆ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಯಾವುದೇ ರೀತಿಯ ಕೋಮು ಉದ್ವಿಗ್ನತೆ ಉಂಟಾಗದಂತೆ ತ್ವರಿತ ಹಾಗೂ ಜವಾಬ್ದಾರಿಯುತ ಕ್ರಮಕೈಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪುತ್ತೂರು ಡಿವೈಎಸ್ಪಿ ಹಾಗೂ ಪುತ್ತೂರು ನಗರ ಪೊಲೀಸರಿಗೆ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಭಿನಂದನೆ ಸಲ್ಲಿಸುತ್ತದೆ ಎಂದು ಪರಿಷತ್ತಿನ ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದರು.
ಅವರು ಸೋಮವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟನೆಯನ್ನು ಬಿಜೆಪಿಯು ರಾಜಕೀಯವಾಗಿ ಬಳಸಲು ಪ್ರಯತ್ನಿಸಿ ನೈಜ ಸಂಗತಿಗಳನ್ನು ಮರೆ ಮಾಚಿ ಯುವಕರು ಯುವತಿಯನ್ನೇ ಗುರಿಯಾಗಿಸಿ ಚೂರಿ ಹಿಡಿದಿದ್ದರು ಎಂದು ಆರೋಪಿಸಿದ್ದರು. ಈ ಮೂಲಕ ಕೋಮು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ನಡೆಸಿದ್ದರು.
ಈ ಘಟನೆಗೆ ಸಂಬಂಧಿಸಿ ಪುತ್ತೂರಿಗೆ ಆಗಮಿಸಿ ಹೇಳಿಕೆ ನೀಡಿದ್ದ ಸಂಸದರು ಬೇರೆ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಎಷ್ಟು ಬಾರಿ ಅವರ ಬಳಿಗೆ ಹೋಗಿ ಹೋರಾಟ ನಡೆಸಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು. ಸಮಾಜದಲ್ಲಿ ಕೋಮು ವೈಷಮ್ಯ ಸೃಷ್ಟಿಸುವ ಯಾವುದೇ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಎಂದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನೌಷದ್ ಬೊಳುವಾರು, ಬಶೀರ್ ಪರ್ಲಡ್ಕ, ಅಶ್ರಫ್ ಬಾವು ಉಪಸ್ಥಿತರಿದ್ದರು.