ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ


ಮಂಗಳೂರು: ಇಲ್ಲಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಯಿತು.


ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪವನ್ನು ಬೆಳಗಿಸಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮಾಡಿದ ಸೈನಿಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.


ಬಳಿಕ ಅವರು ಮಾತನಾಡಿ, ಭಾರತದ ಗಡಿಯಲ್ಲಿ ನಿಂತು ನಮ್ಮ ಸೈನಿಕರು ಪಹರೆ ಕಾಯುತ್ತಿರುವುದರಿಂದ. ಇಂದು ಭಾರತದ ಒಳಗೆ ಸುಖಕರವಾದ ವಾತಾವರಣ ನಿರ್ಮಾಣವಾಗಿದೆ. ದೇಶದ ಮೊದಲ ದಂಡನಾಯಕರಾಗಿ ಕಾರ್ಯ ನಿರ್ವಹಿಸಿದ ಜನರಲ್ ಕಾರಿಯಪ್ಪ ಅವರ ಸೇವೆ ಅನನ್ಯವಾದದ್ದು. ಮೈಕೊರೆಯುವ ಚಳಿಯನ್ನು ಲೆಕ್ಕಿಸದೆ ಹಿಮಾಲಯದ ಎತ್ತರದ ಜಾಗದಲ್ಲಿ ನಿಂತು ಹೋರಾಡುವ ಸೈನಿಕರ ತ್ಯಾಗ ಅವಿಸ್ಮರಣಿಯವಾದದ್ದು. ಜಗತ್ತಿನ ಯುದ್ಧದ ಇತಿಹಾಸದಲ್ಲಿ ಕಾರ್ಗಿಲ್‌ನಷ್ಟು ಕಷ್ಟಕರವಾದ ಭೀಕರವಾದ ಯುದ್ಧ ನಡೆದಿಲ್ಲ ಎಂದು ಹೇಳಿದರು.


74 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ನಮ್ಮ ದೇಶದ 1363 ಸೈನಿಕರು ಗಾಯಗೊಂಡಿದ್ದರು 500 ಜನ ಸೈನಿಕರು ಹುತಾತ್ಮರಾದರು. ಯುದ್ಧದ ಸಂದರ್ಭದಲ್ಲಿ ಸತ್ತ ಶತ್ರು ದೇಶದ ಸೈನಿಕರ ಸುಮಾರು 250ಕ್ಕೂ ಹೆಚ್ಚು ಸತ್ತ ಸೈನಿಕರ ದೇಹವನ್ನು ಭಾರತದ ಸೈನಿಕರು ಅಂತಿಮ ಸಂಸ್ಕಾರವನ್ನು ಮಾಡಿಕೊಟ್ಟಿದ್ಫು ನಮ್ಮ ದೇಶದ ಸೈನಿಕರ ಯುದ್ಧ ಸಂಸ್ಕಾರವನ್ನು ತೋರಿಸುತ್ತದೆ ಎಂದರು.


ಈ ಭೂಮಿ ನಮ್ಮ ಮಾತೃ ಭೂಮಿ ಇದು ನಮ್ಮ ಬದುಕಿಗೆ ಆಧಾರ. ಎಲ್ಲರಿಗೂ ಸೈನ್ಯಕ್ಕೆ ಸೇರುವ ಭಾಗ್ಯ ಸಿಗದೆ ಇದ್ದರೂ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿ ದೇಶದ ರಕ್ಷಣೆಗೆ ಪ್ರಯತ್ನ ಮಾಡೋಣ. ಕ್ಯಾಪ್ಟನ್ ಮನೋಜ್ ಪಾಂಡೆ ಎಂಬವರು ಯುದ್ಧದಲ್ಲಿ ಭಾಗವಹಿಸಿದ್ದರು ಅವರು ಯುದ್ಧಕ್ಕೆ ಹೋಗುವುದಕ್ಕಿಂತ ಮುಂಚೆ ನನ್ನ ಹೃದಯ ಇನ್ನಷ್ಟು ಸಾಧನೆಯನ್ನು ಅಪೇಕ್ಷೆ ಮಾಡುತ್ತಿದೆ ಎಂದು ತಮ್ಮ ಸ್ಫೂರ್ತಿದಾಯಕ ಮಾತನ್ನು ಸೈನಿಕರೊಂದಿಗೆ ಹಂಚಿಕೊಂಡಿದ್ಧ ಮಾತನ್ನು ಸ್ಮರಿಸಿಕೊಂಡರು. 


ಗಡಿಯ ವಿಚಾರ ಬಂದಾಗ ನಾನು ಸರ್ವೋಚ್ಚ ಬಲಿದಾನಕ್ಕೆ ಸಿದ್ದನಾಗಿರುತ್ತೇನೆ ಎಂಬುದು ಭಾರತೀಯ ಸೈನಿಕನ ಮನಸ್ಥಿತಿಯಾಗಿರುತ್ತದೆ. ನಾವೆಲ್ಲರೂ ನಾವು ಮಾಡುವ ಕೆಲಸದಲ್ಲಿ ಜವಾಬ್ದಾರಿಯಲ್ಲಿ ದೇಶಕ್ಕೆ ಮೊದಲು ಆದ್ಯತೆ ನೀಡಬೇಕು. ಸಮಾಜದಲ್ಲಿ ನಾವು ಯಾವ ಶಿಸ್ತನ್ನು ಒಳ್ಳೆಯದನ್ನು ಕಾಣಲು ಇಷ್ಟ ಪಡುತ್ತೇವೆಯೋ ಅದನ್ನು ನಮ್ಮ ಜೀವನದಲ್ಲಿ ಪ್ರತಿಬಿಂಬಿಸಿಕೊಳ್ಳಲು ಪ್ರಯತ್ನಿಸೋಣ ಎಂದರು.


ರಸ್ತೆಗಳಿರಬಹುದು, ಗೋಡೆಗಳಿರಬಹುದು, ಸಾರ್ವಜನಿಕ ರಸ್ತೆಯಲ್ಲಿ ಉಗುಳುತ್ತೇವೆ, ಸ್ವಚ್ಛತೆಯನ್ನು ಹಾಳು ಮಾಡುತ್ತಿದ್ದೇವೆ. ನಮ್ಮಲ್ಲಿ ಮೌಲ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ನಮಗಾಗಿ ತ್ಯಾಗ ಬಲಿದಾನ ಮಾಡಿದ ವೀರ ಸೈನಿಕರಿಗೆ ಪ್ರತಿನಿತ್ಯ ವಂದನೆಯನ್ನು ಸಲ್ಲಿಸಬೇಕು. ಸೈನಿಕನ ಹಾಗೆ ದೇಶಕ್ಕಾಗಿ ಬದ್ಧನಾಗಿರಬೇಕು ಎಂಬ ದ್ಯೇಯ ನಮ್ಮದಾಗಬೇಕು. ದೇಶ ರಕ್ಷಣೆಯ ಜವಾಬ್ದಾರಿ ಕೇವಲ ಸೈನಿಕರಿಗೆ ಮಾತ್ರ ಅಲ್ಲ ಇಲ್ಲಿರುವ ಪ್ರತಿಯೊಬ್ಬ ಪ್ರಜೆಗಳದ್ದಾಗಬೇಕು ಎಂದರು.


ನಾವೆಲ್ಲ ಭಾರತೀಯ ಅಂತ ತೋರಿಸಬೇಕಾದರೆ ನಮ್ಮೆಲ್ಲರ ವ್ಯಕ್ತತ್ವದಲ್ಲಿ ನಾನೊಬ್ಬ ಭಾರತೀಯ ಎಂಬ ಹೆಮ್ಮೆ ಕಾಣಬೇಕು, ಬದುಕಿದರೆ ದೇಶಕ್ಕಾಗಿ ಬದುಕುತ್ತೇನೆ ಎಂಬ ದೇಶ ಭಕ್ತಿ ಜಾಗೃತವಾದರೆ ಅದೇ ನಿಜವಾದ ಅರ್ಥದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿಯಾಗುತ್ತದೆ ಎಂದು ಹೇಳುತ್ತಾ ಕಾರ್ಗಿಲ್ ವಿಜಯ್ ದಿವಸದ ಶುಭಾಶಯಗಳನ್ನು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಮಾತನಾಡಿ, ಮಕ್ಕಳ ಸಾಧನೆ ನಮಗೆ ಖುಷಿ ತಂದಿದೆ. ಎಲ್ಲರು ಶ್ರಮ ಪಟ್ಟು ನಿರಂತರ ಪ್ರಯತ್ನದೊಂದಿಗೆ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳಿಂದ ಇಂತಹ ಸಾಧನೆ ಮೂಡಿ ಬರಲಿ ಅಂತ ಹೇಳುತ್ತಾ ಮಾತಿಗೆ ವಿರಾಮ ನೀಡಿದರು.


ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಪದವಿ ಪೂರ್ವ ಕಾಲೇಜಿನ್ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಇದು ಸಂಸ್ಥೆಗೆ ಹೆಮ್ಮೆ ಪಡುವಂತಹದ್ದು ಸಂಗತಿ. ರಾತ್ರಿ ಹಗಲು ನಿರಂತರವಾದ ಅಭ್ಯಾಸದೊಂದಿಗೆ ಛಲ ಬಿಡದೆ ಈ ಸಾಧನೆಯನ್ನು ಮಾಡಿದ್ದಾರೆ ಈ ಸಾಧನೆ ಎಲ್ಲರಿಗೂ ಪ್ರೇರಣೆಯಗಬೇಕು. ನೀವು ಕೂಡ ಇಂತಹ ಸಾಧನೆ ಮಾಡಬೇಕು ಇದೆ ವೇದಿಕೆಯಲ್ಲಿ ನಿಮ್ಮ ಹೆತ್ತವರನ್ನು ಕರೆಸಿ ಸನ್ಮಾನ ಮಾಡುವ ಸೌಭಾಗ್ಯ ನಮಗೆ ಒಲಿದು ಬರಲಿ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳಿಗೆ ಡಾ. ಕೆ.ಸಿ. ನಾಕ್ ಅವರು 10,000 ರೂಪಾಯಿಗಳ ಗೌರವ ಧನ ನೀಡುವ ಮೂಲಕ ಇಂದು ಮಕ್ಕಳ ಸಾಧನೆಯನ್ನು ಅಭಿನಂದಿಸಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಕ್ಕಳಿಂದ ಮೂಡಿ ಬರಲಿ ಹೆಚ್ಚಿನ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದೆ ವೇದಿಕೆಯಲ್ಲಿ ನಾವು ಸನ್ಮಾನಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ನಡೆಸಲ್ಪಡುವ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಕ್ತಿ ಪದವಿ ಪೂರ್ವ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಷಕರು ಶಕ್ತಿ ವಿದ್ಯಾ ಸಂಸ್ಥೆಯ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೇನೇ ವಿದ್ಯಾರ್ಥಿಗಳು ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಗೆ, ಉಪನ್ಯಾಸಕರಿಗೆ, ಹಾಗೂ ಆಡಳಿತ ಮಂಡಳಿಗೂ ಧನ್ಯವಾದಗಳನ್ನು ತಿಳಿಸಿದರು.

ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಸಿಯಲ್ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್. ಭಟ್ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಮಾಜಿ ಸೈನಿಕ ನರೇಶ್ ಪೈ ಉಪಸ್ಥಿತರಿದ್ದರು.

ಶಿಕ್ಷಕ ಮಂಜುನಾಥ್ ಅತಿಥಿ ಪರಿಚಯ ಮಾಡಿದರು. ವರ್ಚಸ್ ಕಾರ್ಯಕ್ರಮವನ್ನು ನಿರೂಪಿಸಿದರು. ದಿನದ ಮಹತ್ವವನ್ನು ಸಾನ್ವಿ ಶೇಖರ್ ಓದಿದರು. ಪ್ರಗತಿ ಸ್ವಾಗತಿಸಿ, ಹರಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article