ಒಳರಸ್ತೆ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಗುದ್ದಲಿ ಪೂಜೆ

ಒಳರಸ್ತೆ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಗುದ್ದಲಿ ಪೂಜೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ೮ನೇ ವಾರ್ಡಿನ ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು.

ಒಟ್ಟು ಎರಡು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಪ್ರಮುಖವಾಗಿ ಶ್ರೀ ಧೂಮಾವತಿ ರಸ್ತೆ ಕಾಂಕ್ರೀಟೀಕರಣ ಮತ್ತು ಚರಂಡಿ ವ್ಯವಸ್ಥೆ, ಎನ್‌ಎಂಪಿಟಿ ಹೌಸಿಂಗ್ ಕಾಲೋನಿ ರಸ್ತೆ ಕಾಂಕ್ರೀಟೀಕರಣ, ಅಣ್ಣಪ್ಪ ರಸ್ತೆ ಕಾಂಕ್ರೀಟೀಕರಣ, ಟಿ.ಕೆ. ಚೌಟ ನಗರ, ಬೃಂದಾವನ ನಗರ, ಶಿವಾಜಿನಗರ ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ.

ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯ ವರುಣ್ ಚೌಟ ಮಾತನಾಡಿ, ಶಾಸಕ ಡಾ. ಭರತ್ ಶೆಟ್ಟಿ ಅವರ ಮುತುವರ್ಜಿಯಿಂದ ವಿಶೇಷ ಅನುದಾನ ಬಿಡುಗಡೆಯಾಗಿದೆ. ಈ ಹಿಂದೆ ಸುರತ್ಕಲ್ ಗೋವಿಂದ ದಾಸ ಕಾಲೇಜು ಹಿಂಭಾಗದ ರಸ್ತೆ ಕಾಂಕ್ರೀಟೀಕರಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ನಾಗರಿಕರ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ ಅವರು, ‘ಸರ್ಕಾರದ ಅನುದಾನ ಬಿಡುಗಡೆಯಾಗದಿರುವುದು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಎಫ್‌ಎಆರ್ ಅನುದಾನ ಬಳಸಿಕೊಂಡು ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿ ನಡೆಯುವ ಸಂದರ್ಭ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭ ಪದ್ಮನಾಭ ಸುವರ್ಣ, ಉಮೇಶ್ ಮೂಡುಪಟ್ನ, ಜಗನ್ನಾಥ್ ದೇವಾಡಿಗ, ಪ್ರೊ. ಕೃಷ್ಣಮೂರ್ತಿ, ಅಶೋಕ್ ದೇವಾಡಿಗ, ಲೀಲಾವತಿ, ಅರುಣ್ ಭಟ್, ರಾಮನಾಥ್ ಕೋಡಿಕೆರೆ, ಕೆಂಚನೂರು ಬಾಲಕೃಷ್ಣ ಶೆಟ್ಟಿ, ಅನುಪಮ, ಪ್ರಜ್ವಲ್ ಶೆಟ್ಟಿ, ಮನೋಜ್, ಸಚಿನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article