ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾದ ಅಕ್ಷರ ವಾಹಿನಿ ಬಸ್ ಉದ್ಘಾಟನೆ
ನೂತನ ಬಸ್ಗೆ ಚಾಲನೆ ನೀಡಿ ಉದ್ಘಾಟಿಸಿದ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮಾಜದ ಸಹಭಾಗಿತ್ವ ಅತ್ಯಂತ ಮಹತ್ವದ್ದೆಂದು ಹೇಳಿದ ಅವರು, ತಾವು ಕಲಿತ ಶಾಲೆಯನ್ನೇ ಎರಡನೇ ಮನೆ ಎಂದು ಕಂಡುಕೊಂಡಿರುವ ರಘು ಸಾಲ್ಯಾನ್ ಅವರು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಲೆಗೆ ಈಗಾಗಲೇ ಒಂದು ಬಸ್ ಒದಗಿಸಿದ್ದ ರಘು ಸಾಲ್ಯಾನ್, ಇದೀಗ ಎರಡನೇ ಬಸ್ನ್ನೂ ಕೊಡುಗೆಯಾಗಿ ನೀಡಿರುವುದು ವಿಶೇಷ. ಖಾಸಗಿ ಶಾಲೆಗಳ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳೂ ಬಸ್ಗಳಲ್ಲಿ ಪ್ರಯಾಣಿಸಬೇಕು, ಸಮವಸ್ತ್ರದ ಜೊತೆಗೆ ಬಣ್ಣದ ಜೆರ್ಸಿ ಧರಿಸಿ ಆತ್ಮವಿಶ್ವಾಸದಿಂದ ಓಡಾಡಬೇಕು ಎಂಬ ಕನಸನ್ನು ಅವರು ನನಸಾಗಿಸಿದ್ದಾರೆ ಎಂದು ಶಾಸಕ ಭರತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಒಮ್ಮೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆ ಇಂದು ೪೫೦ಕ್ಕೂ ಹೆಚ್ಚು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಲು ರಘು ಸಾಲ್ಯಾನ್ ಹಾಗೂ ಹೇಮಲತಾ ಆರ್. ಸಾಲ್ಯಾನ್ ಅವರ ಸೇವಾ ಮನೋಭಾವವೇ ಕಾರಣವಾಗಿದೆ. ಶಾಲೆಯ ಹಿತದೃಷ್ಟಿಯಿಂದ ಇವರಿಬ್ಬರೂ ಶಿಕ್ಷಣ ತಜ್ಞರಿಗೆ ಕಡಿಮೆಯಿಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಪಾಲೆಮಾರ್, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಂತಹ ಉತ್ತಮ ಸರ್ಕಾರಿ ಶಾಲೆ ವಿರಳ. ಬಡ ಮತ್ತು ಗ್ರಾಮೀಣ ವಲಯದ ಮಕ್ಕಳಿಗೆ ಇಲ್ಲಿ ಆದ್ಯತೆಯೊಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಉಳ್ಳವರು ತಮ್ಮ ಊರಿನ ಶಾಲೆಗಳ ಅಭಿವೃದ್ಧಿಗೆ ನೆರವಾಗಬೇಕು. ಈ ಶಾಲೆ ಮುಂದಿನ ದಿನಗಳಲ್ಲಿ ಹೈಸ್ಕೂಲ್ ಹಾಗೂ ಪಿಯು ಕಾಲೇಜಾಗಿ ಬೆಳೆಯಲಿ ಎಂದು ಆಶಿಸಿದರು.