ಕರ್ಣಾಟಕ ಬ್ಯಾಂಕ್: ಹೆಚ್ಚುವರಿ ನಿರ್ದೇಶಕರಾಗಿ ಡಾ. ಎಂ. ಅರುಣ ಶ್ಯಾಮ್ ನೇಮಕ
ಡಾ. ಎಂ. ಅರುಣ ಶ್ಯಾಮ್ ಅವರು ಬಿಸಿನೆಸ್ ಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಂವಿಧಾನ ಮತ್ತು ಕ್ರಿಮಿನಲ್ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. 2004ರಿಂದ ವಕೀಲ ವೃತ್ತಿಯಲ್ಲಿ ಸಕ್ರಿಯರಾಗಿರುವ ಅವರು, ಸಿವಿಲ್ ನ್ಯಾಯಾಲಯಗಳು, ವಿವಿಧ ನ್ಯಾಯಮಂಡಳಿಗಳು, ಡೆಟ್ ರಿಕವರಿ ಟ್ರಿಬ್ಯುನಲ್, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ, ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗಳಲ್ಲಿ ವಾದ ಮಂಡಿಸಿರುವ ಅನುಭವ ಹೊಂದಿದ್ದಾರೆ. ಸಿವಿಲ್, ಕ್ರಿಮಿನಲ್, ಸಂವಿಧಾನಾತ್ಮಕ, ಕಾರ್ಪೊರೇಟ್, ಬ್ಯಾಂಕಿಂಗ್, ಕಾರ್ಮಿಕ, ವಿಮೆ ಹಾಗೂ ಸೇವಾ ಕಾನೂನು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಅಧಿಕ ಅನುಭವ ಪಡೆದಿದ್ದಾರೆ.
2020ರಿಂದ 2023ರವರೆಗೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಡಾ. ಅರುಣ ಶ್ಯಾಮ್, ಮಹತ್ವದ ಸಾಂವಿಧಾನಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು. 2021ರ ಡಿಸೆಂಬರ್ ೧೪ರಂದು ಕರ್ನಾಟಕ ಹೈಕೋರ್ಟ್ ಅವರನ್ನು ಹಿರಿಯ ವಕೀಲರಾಗಿ ಗೌರವಿಸಿತ್ತು.