ಪ್ರಕ್ಷುಬ್ದ ಸಮುದ್ರದಲ್ಲಿ ಅಪಾಯದಲ್ಲಿದ್ದ ಆರು ಮೀನುಗಾರರ ರಕ್ಷಣೆ
ಸುರತ್ಕಲ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲುಗಳ ದೂರದಲ್ಲಿ ಸಂಚರಿಸುತ್ತಿದ್ದ ಮೀನುಗಾರಿಕಾ ದೋಣಿ ’ಮಂಜು ಮಾಥ್’ನಿಂದ ಸೋಮವಾರ ಸಂಜೆ ಅಪಾಯದ ಕರೆ ಬಂದಿತ್ತು. ಸಮುದ್ರದಲ್ಲಿ ಬಿರುಗಾಳಿಯ ಪರಿಣಾಮವಾಗಿ ದೋಣಿಗೆ ಹಾನಿಯಾಗಿದ್ದು, ದೋಣಿಯೊಳಗೆ ನೀರು ನುಗ್ಗತೊಡಗಿದ್ದರಿಂದ ಅದರಲ್ಲಿದ್ದ ಎಲ್ಲ ಆರು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಗಸ್ತು ಕಾರ್ಯದಲ್ಲಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ ’ಐಸಿಜಿಎಸ್ ಸಚೇತ್’ ಹಡಗು ತಕ್ಷಣವೇ ತನ್ನ ಮಾರ್ಗವನ್ನು ಬದಲಿಸಿ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿತು. ಸುಮಾರು 90 ನಿಮಿಷಗಳಲ್ಲಿ ಸಂಕಷ್ಟದಲ್ಲಿದ್ದ ದೋಣಿಯ ಬಳಿ ತಲುಪಿದ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ, ಬಿರುಗಾಳಿ, ಪ್ರಬಲ ಗಾಳಿ ಮತ್ತು ಕಡಿಮೆ ಗೋಚರತೆಯ ನಡುವೆಯೂ ಕಾರ್ಯಾಚರಣೆ ನಡೆಸಿದರು.
ಮುಳುಗುವ ಸ್ಥಿತಿಯಲ್ಲಿದ್ದ ದೋಣಿಯಿಂದ ಮೀನುಗಾರರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ರಿಮೋಟ್-ಆಪರೇಟೆಡ್ ಲೈಫ್ಬಾಯ್ಗಳನ್ನು ಬಳಸಿದರು. ಸಂಜೆ ಸುಮಾರು 6 ಗಂಟೆಗೆ ಎಲ್ಲ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ’ಐಸಿಜಿಎಸ್ ಸಚೇತ್’ ನವ ಮಂಗಳೂರು ಬಂದರಿಗೆ ತೆರಳಿ, ರಕ್ಷಿಸಲ್ಪಟ್ಟ ಮೀನುಗಾರರನ್ನು ದಡಕ್ಕೆ ಕರೆತಂದು ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿತು.
ರಕ್ಷಿಸಲ್ಪಟ್ಟ ’ಮಂಜು ಮಾಥ್’ (ನೋಂದಣಿ ಸಂಖ್ಯೆ: IND KA 02 MO 5268) ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ ಫೈಬರ್ ಗ್ಲಾಸ್ ಮೀನುಗಾರಿಕಾ ದೋಣಿಯಾಗಿದ್ದು, ಘಟನೆ ನಡೆದ ವೇಳೆ ಆರು ಮಂದಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.