ಕರಾವಳಿಯ ಹಲವಡೆ ಸಾಮಾನ್ಯ ಮಳೆ: ಮುಂದಿನ ವಾರದಿಂದ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ!-ಪಶ್ಚಿಮಘಟ್ಟ ಅಡಿಭಾಗದಲ್ಲಿ ಉತ್ತಮ ಮಳೆ ನಿರೀಕ್ಷೆ
ಮಂಗಳೂರು: ಕರಾವಳಿಯುದ್ದಕ್ಕೂ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡುಬಂದಿದ್ದು, ಗುರುವಾರ ಕರಾವಳಿಯಾದ್ಯಂತ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ದಿನದ ಬಹುತೇಕ ಸಮಯ ಮೋಡಮುಸುಕಿದ ವಾತಾವರಣವಿದ್ದು, ಸಂಜೆ ವೇಳೆಗೆ ಗುಡುಗು ಹಾಗೂ ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಹವಾಮಾನ ಇಲಾಖೆಯ ಸದ್ಯದ ಮುನ್ಸೂಚನೆಯಂತೆ, ಮುಂದಿನ ಒಂದು ವಾರದ ಬಳಿಕ ಕರಾವಳಿಯಲ್ಲಿ ಮಳೆ ಸಂಪೂರ್ಣ ಕ್ಷೀಣಗೊಳ್ಳಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲೂ ಸಾಧಾರಣ ಮಳೆಯಷ್ಟೇ ಮುಂದುವರಿಯಲಿದೆ. ಗುರುವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 33.4 ಮಿ.ಮೀ ಮಳೆ ದಾಖಲಾಗಿದೆ.
ಜಿಲ್ಲೆಯ ಗರಿಷ್ಠ ಮಳೆ ಬಂಟ್ವಾಳ 42.5 ಮಿ.ಮೀ ಮಳೆಯಾಗಿದೆ. ಉಳ್ಳಾಲದಲ್ಲಿ 36.3 ಮಿಮಿ, ಮೂಡುಬಿದಿರೆ 23.2 ಮಿ.ಮೀ, ಕಡಬದಲ್ಲಿ 36.6 ಮಿಮಿ, ಬೆಳ್ತಂಗಡಿ 30.9 ಮಿ.ಮೀ, ಪುತ್ತೂರು 32.2 ಮಿ.ಮೀ, ಮಂಗಳೂರಿನಲ್ಲಿ 35.5 ಮಿಮಿ, ಸುಳ್ಯದಲ್ಲಿ 29.7ಮಿ.ಮೀ., ಮೂಲ್ಕಿ 32.3 ಮಿ.ಮೀ. ಮಳೆ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನೇತ್ರಾವತಿ ನದಿ (ಬಂಟ್ವಾಳ) 6.030 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 24.70 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 79.385 ಮೀ, ಗುರುಪುರ ನದಿ (ಅಡ್ಡೂರು) 2.720 ಮೀ ನೀರಿದೆ. ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ನದಿ ತೀರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮುಂಗಾರು ದುರ್ಬಲಕ್ಕೆ ಕಾರಣವೇನು?
ಗುಜರಾತ್ ತಲುಪಿರುವ ವಾಯುಭಾರ ಕುಸಿತ ಮತ್ತು ಮಧ್ಯಪ್ರದೇಶದಲ್ಲಿದ್ದ ಗಾಳಿಯ ಸುಳಿಸುತ್ತು ಶಿಥಿಲಗೊಳ್ಳುತ್ತಿರುವುದರಿಂದ ಮುಂಗಾರು ಮಳೆ ಮತ್ತೆ ದುರ್ಬಲಗೊಳ್ಳುವ ಸ್ಪಷ್ಟ ಲಕ್ಷಣಗಳಿವೆ ಎಂದು ವರದಿಯಾಗಿದೆ. ಆದಾಗ್ಯೂ, ಮುಂದಿನ 48 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಪಶ್ಚಿಮಘಟ್ಟದ ಕೆಳಭಾಗದ ಪ್ರದೇಶಗಳಾದ ಚಾರ್ಮಾಡಿ, ಶಿರಾಡಿ ಮತ್ತು ಆಗುಂಬೆ ಸುತ್ತಮುತ್ತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಗಂಟೆಗೆ 35 ರಿಂದ 40 ಕಿ.ಮೀ.ಗೆ ಹೆಚ್ಚಳವಾಗಿರುವುದರಿಂದ ಸಮುದ್ರಕ್ಕಿಳಿಯುವ ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಎನ್ಡಿಆರ್ಎಫ್ ಸಿದ್ಧತೆ:
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದ ಬಿಸಿಲು-ಮೋಡದ ಆಟದೊಂದಿಗೆ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಯಿದೆ. ಗುರುವಾರದಂದು ಗರಿಷ್ಠ 32.1ಡಿ.ಸೆ ಹಾಗೂ ಕನಿಷ್ಠ 24.7ಡಿ.ಸೆ ತಾಪಮಾನ ದಾಖಲಾಗಿದೆ. ಕರಾವಳಿ ಭಾಗದಲ್ಲಿ ಸಂಭವಿಸಬಹುದಾದ ಯಾವುದೇ ತುರ್ತು ಪರಿಸ್ಥಿತಿ ಮತ್ತು ಅನಾಹುತಗಳನ್ನು ಎದುರಿಸಲು ಹಾಗೂ ಸಾರ್ವಜನಿಕರ ರಕ್ಷಣೆಗೆ ಎನ್ಡಿಆರ್ಎಫ್ ಪಡೆ 24*7 ಮಾದರಿಯಲ್ಲಿ ಸಂಪೂರ್ಣ ಸನ್ನದ್ಧವಾಗಿದೆ.