ಮನುಷ್ಯ ಮತ್ತು ಹವಾಮಾನ ಸಂಘರ್ಷದಿಂದ ಮಾತು ಮೌನವಾಗಿದೆ: ಅಕ್ಷತಾ ರಾಜ್ ಪೆರ್ಲ

ಮನುಷ್ಯ ಮತ್ತು ಹವಾಮಾನ ಸಂಘರ್ಷದಿಂದ ಮಾತು ಮೌನವಾಗಿದೆ: ಅಕ್ಷತಾ ರಾಜ್ ಪೆರ್ಲ


ಮಂಗಳೂರು: ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷಗಳನ್ನು ಕಂಡ ನಾವು ಇವತ್ತು ಮನುಷ್ಯ ಮತ್ತು ಹವಾಮಾನದ ನಡುವೆ ಸಂಘರ್ಷವನ್ನು ಕಾಣುತ್ತಿದ್ದೇವೆ, ಮಳೆಗಾಲದಲ್ಲಿ ಮಳೆ ಬಾರದೆ ನಮ್ಮೊಳಗಿನ ಮಾತು ಮೌನವಾಗಿದೆ ಎಂದು ಲೇಖಕಿ ಅಕ್ಷತಾ ರಾಜ್ ಪೆರ್ಲ ಅವರು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತುಳು ಭವನದಲ್ಲಿ ಹಮ್ಮಿಕೊಂಡ ಆಟಿ ತಿಂಗಳ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಹಾಗೂ ಸಾಹಿತಿ ಡಾ. ದಿವಾ ಕೊಕ್ಕಡ ಅವರು ಮಾತನಾಡಿ, ತುಳುನಾಡಿನ ಬಹುತ್ವದ ಪರಂಪರೆ, ಸಾಮರಸ್ಯದ ಬದುಕಿನ ಆಶಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ಜವಾಬ್ದಾರಿ ಲೇಖಕರಲ್ಲಿದೆ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ  ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಸುರೇಶ್ ಬಿ.ನಾವೂರು ಹಾಗೂ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಟ್ರಸ್ಟಿ ಕಿರಣ್ ಕುಮಾರ್  ಅತಿಥಿಗಳಾಗಿ ಭಾಗವಹಿಸಿದ್ದರು.

ಕವಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಕವಿಗಳಾದ ದೇವಿಕಾ ನಾಗೇಶ್, ಸುಲೋಚನಾ ಪಚ್ಚಿನಡ್ಕ, ಹುಸೈನ್ ಕಾಟಿಪಳ್ಳ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ವಿಜಯಲಕ್ಷ್ಮಿ ಕಟೀಲು, ಉಮೇಶ್ ಆಚಾರ್ಯ, ವಾಸಂತಿ ಅಂಬಲಪಾಡಿ, ಮಲ್ಲಿಕಾ ಜೆ. ರೈ, ಸತೀಶ್ ಕಕ್ಕೆಪದವು, ಗಣೇಶ್ ಅದ್ಯಪಾಡಿ, ಧನಂಜಯ ಮೂಡುಬಿದ್ರೆ, ಆಶಾಲತಾ ಚೇವಾರ್, ಪರಿಮಳ ಎನ್.ಎಂ. ಐವರ್ನಾಡ್ ಅವರು ಕವಿತೆ ವಾಚಿಸಿದರು.

ತುಳು ಅಕಾಡೆಮಿ ಸದಸ್ಯ ಬಾಬು ಕೊರಗ ಪಾಂಗಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article