ಹತ್ಯಡ್ಕ ಪರಶುರಾಮ ವನದಲ್ಲಿ ಅಪೂರ್ವ ಗಿಡಗಳ ವನಮಹೋತ್ಸವ
ದೇವಾಲಯ ಪರಿಸರದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ವನ ನಿರ್ಮಾಣದ ಉದ್ದೇಶ ಹೊಂದಿ ಬಹುರಾಷ್ಟ್ರೀಯ ಕಂಪೆನಿ ಕನ್ಸೆರೋದ ಬೆಂಗಳೂರು ಕಾರ್ಯಾಲಯದ ಸುಮಾರು 20 ಮಂದಿ ಉದ್ಯೋಗಿಗಳು ಉತ್ಸಾಹದಿಂದ ಪಾಲ್ಗೊಂಡು 150ಕ್ಕೂ ಅಧಿಕ ರಾಶಿವನ, ನಕ್ಷತ್ರವನ, ನವಗ್ರಹ ವನ ಮೊದಲಾದ ವಿಶಿಷ್ಟ ಜಾತಿಯ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಿ ಪರಿಸರ ಕಾಳಜಿ ಮೆರೆದರು. ಪರಶುರಾಮ ವನದ ರೂವಾರಿಗಳಾದ ಗೋವಿಂದ ದಾಮ್ಲೆ, ನವೀನ ದಾಮ್ಲೆ ನೇತೃತ್ವದಲ್ಲಿ ಅವರ ಮಾರ್ಗದರ್ಶನದಂತೆ ಅಪೂರ್ವ ಗಿಡಗಳನ್ನು ನೆಟ್ಟು ಪೋಷಿಸುವ ವಿಶೇಷ ಜವಾಬ್ದಾರಿ ವಹಿಸಿಕೊಂಡರು.
ಶಿಶಿಲ ನಾಗನಡ್ಕ ಅರ್ಬಿ ಗುಡ್ಡದಲ್ಲಿ ನಾನಾ ಜಾತಿಯ ಅರಣ್ಯ ಸಸ್ಯಗಳ ಬೀಜಬಿತ್ತನೆ ಕಾರ್ಯವೂ ಇದೇ ಸಂದರ್ಭದಲ್ಲಿ ನಡೆಯಿತು. ಪರಿಸರ ಸಂರಕ್ಷಣೆ, ಅರಣ್ಯ ವೃದ್ಧಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಯ ಸಂದೇಶವನ್ನು ಸಾರಿದ ಈ ಕಾರ್ಯಕ್ರಮದಲ್ಲಿ ಊರಿನ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸ್ಥಳೀಯರಾದ ಹಿಮಾಂಶು ಕುಲಕರ್ಣಿ, ಅರವಿಂದ ತುಳುಪುಳೆ, ವೇಣುಗೋಪಾಲ ಗೋಖಲೆ, ಪ್ರಾಣೇಶ ಖರೆ, ಕಾರ್ತೀಕ ದಾಮ್ಲೆ ಮತ್ತಿತರರು ಉಪಸ್ಥಿತರಿದ್ದು, ವನಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಿವೃತ್ತ ಶಿಕ್ಷಕ, ಪರಿಸರ ಪ್ರೇಮಿ, ಲೇಖಕ ಗೋವಿಂದ ದಾಮ್ಲೆ ಅವರು ಸ್ವಯಂಸ್ಫೂರ್ತಿ, ಪರಿಸರ ಕಾಳಜಿಯಿಂದ ಆರಂಭಿಸಿದ ಪರಶುರಾಮವನ ಇಂದು ಮಾದರಿಯಾಗಿ ರೂಪುಗೊಂಡಿದ್ದು, ಮುಂದಿನ ಪೀಳಿಗೆಗೆ ಅಪರೂಪದ ಸಸ್ಯ ಪ್ರಬೇಧಗಳ ಪರಿಚಯ ಮಾಡಿಕೊಡುವ ಪ್ರಕೃತಿ ಶಾಲೆಯಾಗಿ ಬೆಳೆದುಬಂದು ಇತರರಿಗೆ ಆದರ್ಶ ಮಾದರಿಯಾಗಿದೆ. -ವಿನಯ್ ಮಯ್ಯ, ಕನ್ಸೆರೋ ಕಂಪೆನಿಯ ಬೆಂಗಳೂರು ಉದ್ಯೋಗಿ