ಸಂಡೆ ಬಜಾರ್ ತೆರವು ವಿವಾದ ಸಿಐಟಿಯು ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ನೂತನ ಆಯುಕ್ತರಿಗೆ ಮನವಿ
Wednesday, July 29, 2026
ಮಂಗಳೂರು: ಕಳೆದ ಎರಡು ತಿಂಗಳಿನಿಂದ ನಗರದಲ್ಲಿ ವಿವಾದ ಸೃಷ್ಟಿಸಿರುವ ಸಂಡೆ ಬಜಾರ್ ಸಂತೆ ವ್ಯಾಪಾರ ತೆರವು ಕಾರ್ಯಾಚರಣೆ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಇಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದ ನಿಯೋಗವು ನೂತನ ಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ನಿಯೋಗದೊಂದಿಗೆ ಮಾತನಾಡಿದ ಆಯುಕ್ತರು ಸಮಸ್ಯೆಯ ಗಂಭೀರತೆಯ ಬಗ್ಗೆ ಮಾಹಿತಿ ಪಡೆದು ಸಂಡೆ ಬಜಾರ್ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಜು.30 ರಂದು ಸಂಡೆ ಬಜಾರ್ ವ್ಯಾಪಾರದ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಉಸ್ತುವಾರಿ ಸಚಿವರ ಸೂಚನೆ ನಂತರವೂ ಸಂಡೆ ಬಜಾರ್ ತೆರವು ನಡೆದಿತ್ತು ಮತ್ತು ಪಾಲಿಕೆ ಅಧಿಕಾರಿಗಳು ಹಾಗೂ ಬೀದಿ ವ್ಯಾಪಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಆಯುಕ್ತರು ಸ್ಥಳ ಪರಿಶೀಲನೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡ ಬಿ.ಕೆ. ಇಮ್ತಿಯಾಜ್ ತಿಳಿಸಿದ್ದಾರೆ.
ನಿಯೋಗದಲ್ಲಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಕಾರ್ಯಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಪ್ರಮುಖರಾದ ಸಂತೋಷ್ ಆರ್.ಎಸ್., ಮುಜಾಫರ್ ಅಹ್ಮದ್, ಎಂ.ಎನ್. ಶಿವಪ್ಪ, ಸಿಕಂದರ್ ಬೇಗ್, ಹಂಝ ಮೊಹಮ್ಮದ್, ಗುಡ್ಡಪ್ಪ, ಶಿವಾನಂದ, ಪಕೀರ ನಾಯ್ಕ್, ಗದಿಗಪ್ಪ ಮತ್ತಿತರರು ಉಪಸ್ಥಿತರಿದ್ದರು.