ಅಪಪ್ರಚಾರ, ಜೀವ ಬೆದರಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ವಿವಾಹಿತ ಮಹಿಳೆಯನ್ನು ಪ್ರೀತಿಸುವಂತೆ ನಿರಂತರವಾಗಿ ಒತ್ತಾಯಿಸಿ, ಅದಕ್ಕೆ ನಿರಾಕರಿಸಿದಕ್ಕೆ ಅವರ ಬಗ್ಗೆ ಅಪಪ್ರಚಾರ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಸಂಘಟನೆಯೊಂದರ ಇಬ್ಬರು ಕಾರ್ಯಕರ್ತರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಳಲಿ ನಿವಾಸಿಗಳಾದ ಕಿರಣ್ ಕೊಟ್ಟಾರಿ ಮತ್ತು ರಾಜ್ ಮಾರ್ಲ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮಹಿಳೆಯ ಪತಿಯ ಪರಿಚಯಸ್ಥನಾಗಿರುವ ಕಿರಣ್ ಕೊಟ್ಟಾರಿ ಮಾರ್ಚ್ ತಿಂಗಳಲ್ಲಿ ಮೊಬೈಲ್ ಸಂಖ್ಯೆ ಪಡೆದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಉಡುಗೊರೆ ನೀಡುವುದಾಗಿ ಹಾಗೂ ಉತ್ತಮವಾಗಿ ನೋಡಿಕೊಳ್ಳುವುದಾಗಿ ಆಮಿಷ ಒಡ್ಡುತ್ತಿದ್ದ. ಮಹಿಳೆ ಇದನ್ನು ನಿರಾಕರಿಸಿದರೂ, ಅವರನ್ನು ಹಿಂಬಾಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ಕುರಿತು ಮಹಿಳೆ ತನ್ನ ಪತಿಗೆ ಮಾಹಿತಿ ನೀಡಿದ ಬಳಿಕ, ಆರೋಪಿಯು ಮಹಿಳೆಯ ಚಾರಿತ್ರ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿದ್ದು, ಆಕೆಯ ಮಕ್ಕಳ ಕುರಿತು ಸಹ ಅಪಪ್ರಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮತ್ತೊಬ್ಬ ಆರೋಪಿ ರಾಜ್ ಮಾರ್ಲ ಕೂಡ ಮಹಿಳೆಯ ಬಗ್ಗೆ ಅಪಪ್ರಚಾರದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ.
ಇದೇ ವಿಚಾರವನ್ನು ಕಿರಣ್ ಕೊಟ್ಟಾರಿಯು ನನ್ನ ಗಂಡನ ಅಣ್ಣನಿಗೂ ಹೇಳಿದ್ದಾನೆ. ಜೂ.27ರಂದು ಕೈಕಂಬದ ಬಳಿ ಮಹಿಳೆ ಈ ಕುರಿತು ಪ್ರಶ್ನಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.