ಕೊಂಕಣಿ ಅಕಾಡೆಮಿ ಮುದ್ರಿತ ಕಾದಂಬರಿ ಪುಸ್ತಕಗಳ ಲೋಕಾರ್ಪಣೆ
Monday, July 6, 2026
ಮಂಗಳೂರು: ಕೊಂಕಣಿ ಅಕಾಡೆಮಿ ವತಿಯಿಂದ ಮುದ್ರಿತವಾದ ಮೂರು ಕಾದಂಬರಿ ಪುಸ್ತಕಗಳನ್ನು ಜು.೬ ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.
ಅಕಾಡೆಮಿಯು ಹಮ್ಮಿಕೊಂಡ ಕೊಂಕಣಿ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ವಿಜೇತ ರೋಶನ್ ಮೆಲ್ಕಿ ಸಿಕ್ವೇರಾ (ರೋಶು, ಬಜ್ಪೆ) ಅವರು ಬರೆದ ‘ಹೊ ಮ್ಹಜೊ ಅಪ್ರಾಧ್’ (ಪ್ರಥಮ ಬಹುಮಾನ), ವಿನ್ಸೆಂಟ್ ಪಿಂಟೊ (ವಿನ್ಸಿ ಪಿಂಟೊ, ಆಂಜೆಲೊರ್) ಇವರು ಬರೆದ ‘ಕುದ್ರ್ಯಾಚೊ ರಾಕ್ವಲಿ’ (ದ್ವಿತೀಯ ಬಹುಮಾನ) ಹಾಗೂ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಅವರು ಬರೆದ ‘ಆನಿ ಸಾಂಜ್ ಜಾಲಿ’ (ತೃತೀಯ ಬಹುಮಾನ) ಪುಸ್ತಕಗಳನ್ನು ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಲೋಕಾರ್ಪಣೆ ಗೊಳಿಸಿದರು.
ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ., ಸ್ಥಾಯಿ ಸಮಿತಿ ಸದಸ್ಯರಾದ ನವೀನ್ ಲೋಬೊ, ದಯಾನಂದ ಮಡ್ಕೇಕರ್, ಸಮರ್ಥ್ ಭಟ್, ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.