ಮೂಡುಬಿದಿರೆ ಟ್ರಾಫಿಕ್ ಸಮಸ್ಯೆಗೆ ಇಲಾಖೆಗಳ ಜಂಟಿ ಸಹಯೋಗಕ್ಕೆ ನಾಗರಿಕ ಸಲಹಾ ಸಮಿತಿ ಒತ್ತಾಯ
ಮಂಗಳವಾರ ತಹಸೀಲ್ದಾರ ಶ್ರೀಧರ ಮುಂದಲಮನಿ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಪೇಟೆಯ ಟ್ರಾಫಿಕ್ ಸಮಸ್ಯೆಯ ಕುರಿತು ಸಭೆ ನಡೆಯಿತು.
ನಾಗರಿಕ ಸಲಹಾ ಸಮಿತಿಯ ಸಂಚಾಲಕ ಅಕ್ಷಯ್ ಜೈನ್ ಮಾತನಾಡಿ, ಮೂಡುಬಿದಿರೆಯ ಏಕಮುಖ ಸಂಚಾರ ವ್ಯಾವಸ್ಥೆ ಪರಿಣಾಮಕಾರಿಯಾಗಿ ಜಾರಿಗೆ ತರದಿರುವುದರಿಂದ ಸಮಸ್ಯೆಯಾಗುತ್ತಿದೆ. ಪೊಲೀಸ್ ವ್ಯವಸ್ಥೆಯೊಂದರಿಂದಲೇ ಈ ಸಮಸ್ಯೆಯನ್ನು ನಿರ್ವಹಿಸುವುದು ಅಸಾಧ್ಯವಾದುದರಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸುವಂತಾಗಬೇಕು. ಡಿಜಿಟಲ್ ಕಂಪ್ಲೇಂಟ್ ವ್ಯಸಸ್ಥೆಯನ್ನು ಜಾರಿಗೊಳಿಸಬೇಕು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ ಪರವೂರಿಗೆ ಹೋಗುತ್ತಿದ್ದು ಇಂತಹ ವಾಹಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಬಸ್ ನಿರ್ವಾಹಕರ ಪರವಾಗಿ ಮಾತನಾಡಿದ ಸಂತೋಷ್ ಶೆಟ್ಟಿ ಅದಿರು ಸಾಗಾಟದ ಬೃಹತ್ ಗಾತ್ರದ ಲಾರಿಗಳು ನಿಯಮ ಉಲ್ಲಂಘಿಸಿ ಪೇಟೆಯಲ್ಲಿ ಸಂಚರಿಸುವುದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಇದು ಖಾಸಗಿ ಬಸ್ಗಳ ಓಡಾಟದ ಮೇಲೂ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಗಮನಹರಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ತಹಸಿಲ್ದಾರ್ ಕೂಡಲೇ ಉದ್ಯಮಿಗಳು, ಲಾರಿ ಮಾಲೀಕರು ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸುವುದಾಗಿ ಹೇಳಿದರು.
ರಾತ್ರಿ ಕೆಎಸ್ಆರ್ಟಿಸಿ ಬಸ್
ಮೂಡುಬಿದಿರೆಯಿಂದ ಮಂಗಳೂರಿಗೆ ರಾತ್ರಿ 7.30ರ ಬಳಿಕ ಖಾಸಗಿ ಬಸ್ ಸಂಚಾರ ವ್ಯವಸ್ಥೆಯಿಲ್ಲ. ಹೀಗಾಗಿ ರಾತ್ರಿ ಮಂಗಳೂರಿಗೆ ತೆರಳುವವರಿಗೆ ಸಮಸ್ಯೆಯಾಗುತ್ತಿದ್ದು ರಾತ್ರಿ 8.30ಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಪುರಸಭೆಯ ಮಾಜಿ ವಿಪಕ್ಷ ನಾಯಕ ಪಿ.ಕೆ ಥೋಮಸ್ ಸಲಹೆ ನೀಡಿದರು.
ಫುಟ್ಪಾತ್ ಅತಿಕ್ರಮಣ ತೆರವು
ಮೂಡುಬಿದಿರೆ ಮುಖ್ಯರಸ್ತೆ ಬದಿಯ ಫುಟ್ಪಾತ್ನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು ಎಂದು ಕೆಲವರು ಸಲಹೆ ನೀಡಿದರು.
ಈ ಕುರಿತು ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಈ ಕುರಿತು ಪರಿಶೀಲನೆ ನಡೆಸಿ ತೆರವುಹೊಳಿಸಲು ಕಾಲಾವಕಾಶ ನೀಡಲಾಗುವುದು. ಬಳಿಕ ತೆರವುಹೊಳಿಸುವುದಾಗಿ ಉತ್ತರಿಸಿದರು. ಕೆನರಾ ಬಸ್ ಮಾಲಕರ ಸಂಘದ ಮೂಡುಬಿದಿರೆ ಅಧ್ಯಕ್ಷ ನಾರಾಯಣ ಎ.ಎಂ. ಉದ್ಯಮಿ ಅಭಿಜಿತ್ ಎಂ. ತಹಸೀಲ್ದಾರ ಪುಟ್ಟರಾಜು ಕೆಎಸ್ಆರ್ಟಿಸಿ ಸಹಾಯಕ ಇಂಜಿನಿಯರ್ ಹರೀಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ತಾಸಿಫ್, ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.