ಸಂತ ಫಿಲೋಮಿನಾ ಕಾಲೇಜಿನಲ್ಲಿ ಆರು ದಿನಗಳ ವಿದ್ಯಾರ್ಥಿ ಸ್ವಾಗತ ಕಾರ್ಯಕ್ರಮದ ಸಮಾರೋಪ
Friday, July 10, 2026
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ವಾತಾವರಣ, ಶೈಕ್ಷಣಿಕ ನಿರೀಕ್ಷೆಗಳು, ಸಾಂಸ್ಥಿಕ ಮೌಲ್ಯಗಳು ಮತ್ತು ಆವರಣದ ನೀತಿ ಸಂಹಿತೆಯನ್ನು ಪರಿಚಯಿಸುವ ಉದ್ದೇಶದಿಂದ ಶುಕ್ರವಾರ ಆಯೋಜಿಸಿದ ಆರು ದಿನಗಳ ‘ವಿದ್ಯಾರ್ಥಿ ಸ್ವಾಗತ ಕಾರ್ಯಕ್ರಮ’ದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಸಮಾರೋಪ ಭಾಷಣದಲ್ಲಿ ವಿದ್ಯಾರ್ಥಿಗಳು ಕುತೂಹಲವನ್ನು ಬೆಳೆಸಿಕೊಳ್ಳಬೇಕು, ಪ್ರಾಮಾಣಿಕತೆಯನ್ನು ಎತ್ತಿಹಿಡಿಯಬೇಕು ಮತ್ತು ಶಿಸ್ತುಬದ್ಧ ಪರಿಶ್ರಮಕ್ಕೆ ಬದ್ಧರಾಗಿರಬೇಕು ಎಂದು ಕರೆ ನೀಡಿ, ಕಲಿಯಲು, ಬೆಳೆಯಲು ಮತ್ತು ಸಹಾನುಭೂತಿ ಹಾಗೂ ಶ್ರೇಷ್ಠತೆಯೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಲು ಸಿಗುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ವಿಜ್ಞಾನ ವಿಭಾಗದ ಡೀನ್ ಆದ ಡಾ. ಮಾಲಿನಿ ಕೆ. ಅವರು ‘ನೀತಿ ಸಂಹಿತೆ ಮತ್ತು ಸಾಂಸ್ಥಿಕ ನೀತಿಗಳ’ ಕುರಿತು ಮೊದಲ ಅವಧಿಯನ್ನು ನಡೆಸಿ, ಶಿಸ್ತು, ನೈತಿಕತೆ ಮತ್ತು ಕ್ಯಾಂಪಸ್ ಜೀವನವನ್ನು ನಿಯಂತ್ರಿಸುವ ನಿಯಮಗಳ ಪ್ರಾಮುಖ್ಯತೆಯನ್ನು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ಶ್ರೀಮಣಿ ಮತ್ತು ಪ್ರತಿಭಾ ಅವರು ‘ವೈಯಕ್ತಿಕ ವಿಕಸನ ಮತ್ತು ಭಾವನಾತ್ಮಕ ಯೋಗಕ್ಷೇಮ’ ಎಂಬ ಎರಡನೇ ಅವಧಿಯನ್ನು ನಡೆಸಿ, ವಿದ್ಯಾರ್ಥಿಗಳಿಗೆ ಭಾವನಾತ್ಮಕ ಸಮತೋಲನ, ಸ್ವಯಂ-ಅಭಿವೃದ್ಧಿ ಮತ್ತು ಕಾಲೇಜು ಜೀವನಕ್ಕೆ ಹೊಂದಿಕೊಳ್ಳುವ ತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡಿದರು.
‘ಪೀರ್ ಇನ್ಸ್ಪಿರೇಷನ್ಸ್: ಅನುಭವದ ಮೂಲಕ ಸಾಮರ್ಥ್ಯವನ್ನು ಅನಾವರಣಗೊಳಿಸುವುದು’ ಎಂಬ ವಿಷಯದ ಮೇಲಿನ ಮೂರನೇ ಅವಧಿಯಲ್ಲಿ ಬಿ.ಕಾಂ.ನ ಹಿರಿಯ ವಿದ್ಯಾರ್ಥಿಗಳಾದ ಸಂಗೀತಾ ಮತ್ತು ವಿಷ್ಣುಜೀತ್ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಹೊಸದಾಗಿ ಬಂದ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಪ್ರೇರೇಪಿಸಿದರು.
ವಿದ್ಯಾರ್ಥಿನಿಯರಾದ ನಿಶಿತಾ ಕಾವೇರಮ್ಮ ಮತ್ತು ತನ್ಮಯ ಅವರ ಪ್ರಾರ್ಥಿಸಿ, ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಎಸ್. ಡಿ’ಸೋಜಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಶೆಟ್ಟಿ ನಿರೂಪಿಸಿದರು.
