ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪ.ಪೂ. ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿ
Saturday, July 18, 2026
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಇದರ ಆಶ್ರಯದಲ್ಲಿ ಜು.17 ರಂದು ದ್ವಿತೀಯ ಪ.ಪೂ. ವಿದ್ಯಾರ್ಥಿಗಳಿಗೆ ‘ವೃತ್ತಿ ಮಾರ್ಗದರ್ಶನ ತರಬೇತಿ’ ಕಾರ್ಯಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್ ಮಾತನಾಡಿ, ನಮ್ಮ ಜೀವನದಲ್ಲಿ ದೇಶವೇ ಮೊದಲು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದೇಶದ ಬಗೆಗೆ ಚಿಂತನೆಯನ್ನು ಮಾಡಬೇಕು. ಸಮಯವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು, ಶಿಸ್ತಿನ ಜೀವನವನ್ನು ನಡೆಸಬೇಕು. ಯಶಸ್ಸಿನ ಮೂಲವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಸಮತೋಲಿತ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು. ದೇಶ ಸೇವೆಗೆ ಮುಡಿಪಾಗಿರುವ ಭಾರತೀಯ ಸೇನೆ, ವಾಯು ದಳ ಹಾಗು ನೌಕಾದಳದಲ್ಲಿ ಸಿಗುವ ವಿವಿಧ ಅವಕಾಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಮುದಾಯ ಸೇವೆಗಳ ಸಹಾಯಕ ನಿರ್ದೇಶಕ ವಿವೇಕ್ ರಂಜನ್ ಭಂಡಾರಿ ಮಾತನಾಡಿ, ವಿಶ್ವವಿದ್ಯಾಲಯದಿಂದ ನಡೆಸಲ್ಪಡುವ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು, ಮುಖ್ಯವಾಗಿ ಬಯೋ ಮೆಡಿಕಲ್ ಸೈನ್ಸ್, ಫಾರ್ಮಸಿ, ಹೆಲ್ತ್ ಸೈನ್ಸ್, ನರ್ಸಿಂಗ್, ಫಾರೆನ್ಸಿಕ್ ಸೈನ್ಸ್ ಮತ್ತು ಅಗ್ರಿಕಲ್ಚರಲ್ ಪದವಿಗಳ ಬಗ್ಗೆ, ಹಾಗೆಯೇ ಇಂಜಿನಿಯರಿಂಗ್, ಹೊಟೇಲ್ ಮ್ಯಾನೇಜ್ಮೆಂಟ್, ಆರ್ಕಿಟೆಕ್ಚರ್ ಪದವಿಗಳ ಹಾಗೂ ಈ ಎಲ್ಲಾ ಪದವಿಗಳು ವಿದ್ಯಾರ್ಥಿಗಳಿಗೆ ನೀಡುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮಾರ್ಕೆಟಿಂಗ್ ಸಹಾಯಕ, ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಪವನ್ ವರ್ಗೀಸ್ ಮಾತನಾಡಿ, ವಾಣಿಜ್ಯ ವಿಭಾಗವು ವಿಪುಲ ಅವಕಾಶಗಳ ಆಗರವಾಗಿದೆ. ಮತ್ತು ಶಿಸ್ತುಬದ್ಧವಾದ ಕಲಿಕೆ ಈ ವಿಭಾಗದಲ್ಲಿ ತಮ್ಮನ್ನು ಉನ್ನತ ಸ್ಥಾನಕ್ಕೆ ತಲುಪಿಸಬಹುದು. ವಾಣಿಜ್ಯ ಕ್ಷೇತ್ರದಲ್ಲಿ, ಚಾರ್ಟೆಡ್ ಅಕೌಂಟೆಂಟ್ ಅಷ್ಟೇ ಅಲ್ಲದೆ, ಬ್ಯಾಂಕುಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಮೀಡಿಯಾ ಮತ್ತು ಕಮ್ಯುನಿಕೇಶನ್, ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್ ಮುಂತಾದ ಕ್ಷೇತ್ರಗಳು ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ಥಾ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳ ಬಗ್ಗೆ ತಿಳಿದುಕೊಂಡು ಸೂಕ್ತ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಹಲವಾರು ಕಾರ್ಯಗಾರವನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು, ಬೋಧಕ ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಎ. ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷ ಡಾ. ಪ್ರಕಾಶ್ ಬಿ. ಸ್ವಾಗತಿಸಿ, ಉಪನ್ಯಾಸಕರಾದ ಫಿಲೋಮಿನಾ ಮೊಂತೇರೋ ವಂದಿಸಿ, ಸತ್ಯಲತಾ ರೈ ನಿರೂಪಿಸಿದರು.


