ಬಿಜೆಪಿಗೆ ರಾಮದೇವರ ಶಾಪ: ವಿನಯಕುಮಾರ್ ಸೊರಕೆ
ಪುತ್ತೂರು: ಬಿಜೆಪಿಯವರು ನಮ್ಮನ್ನು ಧರ್ಮಕ್ಕೆ ವಿರೋಧ ಎಂಬ ಪ್ರಚಾರ ಮಾಡುತ್ತಾರೆ. ಆದರೆ ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ. ನಮ್ಮ ಧರ್ಮವನ್ನು ಪ್ರಥಮವಾಗಿ ಗೌರವಿಸುತ್ತೇವೆ. ಅನುಸರಿಸುತ್ತೇವೆ. ಬೇರೆ ಧರ್ಮಗಳನ್ನು ದ್ವೇಷ ಮಾಡುವುದಿಲ್ಲ. ಆದರೆ ಇವತ್ತು ಬಿಜೆಪಿಯವರಿಗೆ ರಾಮದೇವರ ಶಾಪ ತಟ್ಟಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಆಗಿರುವ 2 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣದ ಹಿನ್ನೆಲೆಯಲ್ಲಿ ಅಲ್ಲಿನ ಟ್ರಸ್ಟನ್ನು ತಕ್ಷಣ ಬರ್ಕಾಸ್ತುಗೊಳಿಸಬೇಕು. ಭಕ್ತರ ನಂಬಿಕೆಗೆ ತೊಂದರೆ ಆಗದಂತೆ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ಅಯೋಧ್ಯೆಯ ಹೆಸರಿನಲ್ಲಿ ಪ್ರತಿ ಮನೆಮನೆಗೆ ಇಟ್ಟಿಗೆ ಕೊಂಡು ಹೋಗಿ, ಪ್ರಮಾಣ ಮಾಡಿಸಿ, ಹರಕೆ ಹಣ ಕೊಂಡೊಯ್ದರು. ನಾನೂ ಮನೆಯಲ್ಲಿ ಕಾದಿದ್ದೇ. ಆದರೆ ಯಾರೂ ಬರಲೇ ಇಲ್ಲ. ಮರುದಿನ ಕಬ್ಬಿಣದ ಗೇಟ್ ಹಾಕಿದ್ದಾರೆ. ಆಟ್ರೇಷನ್ ನಾಯಿ ಬಿಟ್ಟಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದರು. ವಾಸ್ತವದಲ್ಲಿ ನನ್ನ ಮನೆಯಲ್ಲಿ ಕಬ್ಬಿಣದ ಗೇಟ್ ಇಲ್ಲ. ಆಲೋಷನ್ ನಾಯಿ ಸಾಕಿಯೇ ಇಲ್ಲ. ಅದಿರಲಿ, ರಾಮ ಮಂದಿರದ ನಿರ್ಮಾಣ ಕಲ್ಲಿನಿಂದಾಯ್ತು. ಇಟ್ಟಿಗೆಯಿಂದಲ್ಲ. ಆದರೆ ನನ್ನ ಪ್ರಶ್ನೆ ಇರುವುದು ಇಟ್ಟಿಗೆ ಎಲ್ಲಿ ಹೋಯ್ತು ? ಭಕ್ತರಿಂದ ಸಂಗ್ರಹಿಸಿದ ಹಣ ಎಲ್ಲಿಗೆ ಹೋಯ್ತು ಎಂದು ಪ್ರಶ್ನಿಸಿದ ಅವರು 2 ಸಾವಿರ ಕೋಟಿ ರೂ. ಹಗರಣ ಆಗಿರುವ ಈ ಹೊತ್ತಲ್ಲಿ ಇಡಿ, ಸಿಬಿಐ ಎಲ್ಲಿ ಮಲಗಿದೆ?
ಅಗಾಧ ರಾಮ ಭಕ್ತರ ಭಾವನೆಗೆ ತೊಂದರೆ ಆಗಿರುವಾಗ ಮೌನ ಯಾಕೆ? ನಾ ಖಾವೂಂಗಾ ನಾ ಖಾನೆ ದೂಂಗಾ ಎಂದು ಹೇಳಿದ ನರೇಂದ್ರ ಮೋದಿಯ ಮಾತಿಗೆ ಈಗ ಬೆಲೆ ಎಲ್ಲಿದೆ? ಇದರ ಬಗ್ಗೆ ಮನ್ ಕೀ ಬಾತ್ ಯಾಕಿಲ್ಲ? ಚೌಕಿದಾರ್ ಎಂದು ಕರೆಸಿಕೊಂಡರು. ಈಗ ಮರಿ ಚೌಕಿದಾರ್ ಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ರಾಜಕೀಯದಲ್ಲಿ ಧರ್ಮ ಬೇಕು ಎಂದು ಕಾಂಗ್ರೆಸ್ ನಂಬಿಕೊಂಡು ಬಂದಿದೆ ಎಂದರು. ಇವತ್ತು ಬಿಜೆಪಿಗೆ ರಾಮ ದೇವರ ಶಾಪ ತಟ್ಟಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ, ರಾಜ್ಯ ಸಂಯೋಜಕರಾದ ಚಂದ್ರಹಾಸ ಶೆಟ್ಟಿ, ಶಶಿಕಿರಣ್ ರೈ, ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್, ಪುತ್ತೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಜೋಕಿಂ ಡಿಸೋಜ, ಪ್ರವೀಣ್ ಮುಂಡೋಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.