ಜಿನಿ ಗುಟ್ಟುವ ಮಳೆಯಲ್ಲೂ ಅಧಿಕ ಸಂಖ್ಯೆಯಲ್ಲಿ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು

ಜಿನಿ ಗುಟ್ಟುವ ಮಳೆಯಲ್ಲೂ ಅಧಿಕ ಸಂಖ್ಯೆಯಲ್ಲಿ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು


ಸುಬ್ರಮಣ್ಯ: ದಕ್ಷಿಣ ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ಜಿನಿಗುಟ್ಟುತ್ತಿರುವ ಮಳೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸಿರುತ್ತಾರೆ.


ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರು ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿಲ್ಲ. ಅತ್ಯಧಿಕ ಸಂಖ್ಯೆಯ ಭಕ್ತಾದಿಗಳು ಪ್ರಮುಖ ಸೇವೆಗಳಾದ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಹಾಗೂ ತುಲಾಭಾರ ಸೇವೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಶ್ಲೇಷ ಬಲಿ ಸೇವೆ ಸಲ್ಲಿಸುವ ಭಕ್ತಾದಿಗಳು ಹಿಂದಿನ ದಿನವೇ ಶ್ರೀ ಕ್ಷೇತ್ರಕ್ಕೆ ಬಂದು ವಸತಿಗೃಹದಲ್ಲಿ ವಾಸ್ತವ್ಯ ಹೂಡಿ ಬೆಳಗ್ಗಿನ ಜಾವ ಮೂರು ಬ್ಯಾಚುಗಳಲ್ಲಿ ಸೇವೆ ಸಲ್ಲಿಸ್ತಿದ್ದಾರೆ.


ಸರ್ಪಸಂಸ್ಕಾರ ಸೇವೆ:

ಸರ್ಪ ಹತ್ಯ ದೋಷ ಇದ್ದವರು ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆಯನ್ನು ಕೈಗೊಳ್ಳುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಅಥವಾ ವಾಹನದಡಿಗೆ ಅಥವಾ ಇನ್ನಿತರ ಸ್ಥಳಗಳಲ್ಲಿ ಸರ್ಪ ಹತ್ಯೆ ಆಗಿದ್ದರೆ ಅಥವಾ ಅದನ್ನ ಹತ್ತಿರದಿಂದ ನೋಡಿದ್ದರೆ ಅಂತವರು ಸರ್ಪ ಸಂಸ್ಕಾರ ಸೇವೆಯನ್ನ ಮಾಡುತ್ತಿದ್ದಾರೆ. ಈ ಸೇವೆಯು ಎರಡು ದಿನಗಳದ್ದಾಗಿದ್ದು ಶ್ರೀ ದೇವಳದ ವೆಬ್ಸೈಟ್ನಲ್ಲಿ ಬುಕಿಂಗ್ ಮಾಡಬೇಕಾಗುತ್ತದೆ. ಸುಮಾರು ಎರಡು ಮೂರು ತಿಂಗಳಿಗಾಗುವಷ್ಟು ಸರ್ಪ ಸಂಸ್ಕಾರ ಬುಕಿಂಗ್ ಈಗಾಗಲೇ ಆಗಿರುತ್ತದೆ.

ಆಶ್ಲೇಷ ಬಲಿ ಸೇವೆ ಹಾಗೂ ನಾಗ ಪ್ರತಿಷ್ಠೆ:

ನಾಗದೋಷ, ಕಾಳ ಸರ್ಪ ದೋಷ, ನೀರು, ಭೂಮಿ, ಮದುವೆಯಾಗದಿರುವುದು, ಮಕ್ಕಳಾಗದಿರುವುದು, ವ್ಯಾಜ್ಯಗಳು, ಮನಕ್ಲೇಶ, ಮಾನಸಿಕ ಖಿನ್ನತೆ, ವ್ಯಾಪಾರ ವಹಿವಾಟುಗಳಲ್ಲಿ ಹಿನ್ನಡೆ, ರೋಗ ರುಜಿನಗಳ ಬಾಧೆ ಇತ್ಯಾದಿಗಳಿಗೆ ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠ ಸೇವೆಗಳನ್ನ ಭಕ್ತಾದಿಗಳು ಕುಕ್ಕೆಯಲ್ಲಿ ಮಾಡುತ್ತಿದ್ದಾರೆ. ಈ ಸೇವೆಗೆ ಬುಕಿಂಗ್ ಮಾಡಬಹುದು ಅಥವಾ ಮಾಡದಿದ್ದರೂ ಬೆಳಗ್ಗೆ ಜಾವ ಬೇಗ ಬಂದು ಟಿಕೆಟ್ ಕೌಂಟರಲ್ಲಿ ಟಿಕೆಟ್ ಪಡೆದುಕೊಳ್ಳಬಹುದು. ಆಶ್ಲೇಷ ಬಲಿ ಸೇವೆ ಏಕಾದಶಿ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಗ್ಗೆ ಮೂರು ಬ್ಯಾಚುಗಳು ಹಾಗೂ ಸಂಜೆ ಒಂದು ಬ್ಯಾಚಿನಲ್ಲಿ ನಡೆಯುತ್ತದೆ. ನಾಗ ಪ್ರತಿಷ್ಠ ಸೇವೆ ಮಧ್ಯಾಹ್ನ ಮಹಾಪೂಜೆ ಆದ ನಂತರ 12.30 ಗಂಟೆಯಿಂದ ನಾಗ ಪ್ರತಿಷ್ಠ ಮಂಟಪದಲ್ಲಿ ನಡೆಯುತ್ತದೆ.

ಪ್ರಾರ್ಥನೆ:

ಮದುವೆಯಾಗದೆ ಇರುವುದು, ಮಕ್ಕಳಾಗದಿರುವುದು, ಭೂಮಿಯ ವ್ಯಾಜ್ಯಗಳು, ಮಾನಸಿಕ ಖಿನ್ನತೆ, ವ್ಯಾಪಾರ ಉದ್ಯೋಗಗಳಲ್ಲಿ ಹಿನ್ನಡೆ, ದೀರ್ಘಕಾಲದಿಂದ ಬಾಧಿಸುತ್ತಿರುವ ರೋಗಗಳು,ವ್ಯಾಧಿಗಳು, ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಭಕ್ತರು ಬಂದು ಪ್ರಾರ್ಥನೆಯನ್ನು  ಸಲ್ಲಿಸುತ್ತಿದ್ದಾರೆ. ಪ್ರಾರ್ಥನಾ ಚೀಟಿಯನ್ನ ಆಯಾ ದಿನವೇ  ಟಿಕೆಟ್ ಕೌಂಟರಲ್ಲಿ ಪಡೆದು ಮಧ್ಯಾಹ್ನ ಮಹಾಪೂಜೆ ನಂತರ ಒಳಾಂಗಣದ ಅಲ್ಲಿ ಸರತಿ ಸಾಲಿನಲ್ಲಿ ಬಂದು ದೇವರ ನಡೆ ಅಥವಾ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿದೆ. ಅಲ್ಲಿ ಮುಖ್ಯ ಪುರೋಹಿತರು ಭಕ್ತರು ಹೇಳುವ ತಮ್ಮ ಕಷ್ಟ ನೋವುಗಳಿಗೆ ಪರಿಹಾರವಾಗಿ ಚೀಟಿ ಬರೆದು ಕೊಡುತ್ತಿರುವುದಾಗಿದೆ. ಆ ಚೀಟಿಯಲ್ಲಿ ಬರೆದದ್ದನ್ನು ಭಕ್ತಾದಿಗಳು ತಮ್ಮ ಅಭಿಸ್ಟೆ  ನೆರವೇರಿದ ಬಳಿಕ ಕ್ಷೇತ್ರಕ್ಕೆ ಬಂದು ಸೇವೆಯನ್ನು ಸಲ್ಲಿಸಬೇಕಾಗಿದೆ .

ತುಲಾಭಾರ ಸೇವೆ:

ತಮ್ಮ ಕಷ್ಟ ಕಾಲದಲ್ಲಿ ಅಥವಾ ಇನ್ನಿತರ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾದಿಗಳು ತುಲಾಭಾರ ಸೇವೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ತುಲಾಭಾರವಾದರೆ ಅಕ್ಕಿ ತೆಂಗಿನಕಾಯಿ, ಬೆಲ್ಲದಲ್ಲಿ ನಡೆಯುತ್ತದೆ. ಭಕ್ತಾದಿಗಳು ನಾಣ್ಯ, ಕಲ್ಲುಸಕ್ಕರೆ, ಬೆಲ್ಲ, ಎಳ್ಳು, ಕಾಳು ಮೆಣಸು, ತೆಂಗಿನಕಾಯಿ, ಅಕ್ಕಿ ಇತ್ಯಾದಿಗಳಲ್ಲಿ ಹರಕೆ ಹೊತ್ತಿದ್ದರೆ ಅವರೇ ಅದನ್ನು ತಂದು ಶ್ರೀ ದೇವಳಕ್ಕೆ ಒಪ್ಪಿಸಬೇಕಾಗುತ್ತದೆ.

ಹೊರಾಂಗಣ ಹಾಗೂ ಬೀದಿ ಉತ್ಸವಗಳೆಲ್ಲ ಮುಂದಿನ ದೀಪಾವಳಿಯಿಂದ ಆರಂಭವಾಗುತ್ತದೆ. ಉಳಿದಂತೆ ಬೇರೆ ಬೇರೆ ಸೇವೆಗಳನ್ನು ಮಾಡುವ ಭಕ್ತಾದಿಗಳು ಶ್ರೀ ದೇವಳದ ಕಚೇರಿಯನ್ನು ಸಂಪರ್ಕಿಸಬಹುದು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article