ಆಡು ಬಡಿದು ಬೈಕ್ ಸವಾರ ಗಂಭೀರ ಗಾಯ: ಪರಿಹಾರಕ್ಕೆ ಮಹತ್ವದ ತೀರ್ಪು

ಆಡು ಬಡಿದು ಬೈಕ್ ಸವಾರ ಗಂಭೀರ ಗಾಯ: ಪರಿಹಾರಕ್ಕೆ ಮಹತ್ವದ ತೀರ್ಪು

ಮಂಜೇಶ್ವರ: ಆಡು ಅಡ್ಡ ಬಂದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಾಳುವಿಗೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ವಿಮಾ ಕಂಪೆನಿಗೆ ವಿಧಿಸಿದೆ. 

ಸೀತಾಂಗೋಳಿ ನಿವಾಸಿ ಫ್ರಾನ್ಸಿಸ್ ಪಾಸ್ಕಲ್ ಡಿ’ಸೋಜಾ ಅವರು ದೂರುದಾರರಾಗಿದ್ದಾರೆ.

ಪಾಸ್ಕಲ್ ಡಿ’ಸೋಜಾ ಅವರು ಕಳತ್ತೂರು ಎಂಬಲ್ಲಿಂದ ಕಟ್ಟತ್ತಡ್ಕ ದಾರಿಯಾಗಿ ಸೀತಾಂಗೋಳಿಗೆ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಅವಘಡ ಸಂಭವಿಸಿತ್ತು. ಕಟ್ಟತ್ತಡ್ಕ ಪಳ್ಳಂ ಸಮೀಪ ತಲುಪಿದಾಗ ಆಡುಗಳ ಹಿಂಡೊಂದು ರಸ್ತೆಯಲ್ಲಿ ಅಸ್ತವ್ಯಸ್ತವಾಗಿ ಚಲಿಸುತ್ತಿದ್ದುದು ದುರಂತಕ್ಕೆ ಕಾರಣವಾಗಿತ್ತು. ಆಡಿಗೆ ಬಡಿದು ಬೈಕ್ ಬಿದ್ದ ಫಲವಾಗಿ ಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರ ಜಖಂಗೊಂಡ ಪಾಸ್ಕಲ್ ಅವರ ಚಿಕಿತ್ಸೆಗೆ ಭಾರೀ ಮೊತ್ತ ವ್ಯಯವಾಗಿತ್ತು.

ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ಸಲ್ಲಿಸಿದರೂ ಆರೋಪಿ ಸ್ಥಾನದಲ್ಲಿ ಆಡುಗಳು ಆಗಿರುವುದರಿಂದ ಮೊಕದ್ದಮೆ ದಾಖಲಿಸಲು ಪೊಲೀಸರು ನಿರಾಕರಿಸಿದ್ದರು. ಇದೇ ನೆಪವೊಡ್ಡಿ ವಿಮಾ ಕಂಪನಿಯೂ ಪರಿಹಾರ ನೀಡಲು ವಿಸಮ್ಮತಿಸಿತು. ಇದರಿಂದಾಗಿ ಸಂತ್ರಸ್ತ ವ್ಯಕ್ತಿಯು ಗ್ರಾಹಕ ದೂರು ಪರಿಹಾರ ಆಯೋಗದ ಮೊರೆ ಹೋಗಿದ್ದರು.

ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ದೂರುದಾರರಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯಾಲಯ ವೆಚ್ಚವನ್ನು ನೀಡುವಂತೆ ಮಹತ್ವದ ಆದೇಶ ನೀಡಿದೆ.

ವಾದಿಯ ಪರವಾಗಿ ಕಾಸರಗೋಡಿನ ಖ್ಯಾತ ನ್ಯಾಯವಾದಿ ಥೋಮಸ್ ಡಿ’ಸೋಜಾ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article