ಕಾರು ಢಿಕ್ಕಿ: ಐವರಿಗೆ ಗಾಯ
ಬಂಟ್ವಾಳ: ಕಾವಳಪಡೂರು ಗ್ರಾಮದ ಎನ್ ಸಿ ರೋಡು ಚರ್ಚ್ ಬಳಿ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಅಟೋ ರಿಕ್ಷಾ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಐವರು ಗಾಯಗೊಂಡ ಘಟನೆ ಸಂಭವಿಸಿದೆ.
ಗಾಯಗೊಂಡವರನ್ನು ಅಟೋ ರಿಕ್ಷಾ ಚಾಲಕ, ಮಂಗಳೂರು ತಾಲೂಕು, ಪಾವೂರು ಗ್ರಾಮದ ಕಿಲ್ಲೂರು ನಿವಾಸಿ ಲತೀಶ್ (40), ಅವರ ಪತ್ನಿ ಯೋಗಿನಿ ಹಾಗೂ ಪುತ್ರ ಕುಶಿಕ್ ಮತ್ತು ಬೈಕ್ ಸವಾರ ಸುರಕ್ಷಿತ್ ಕೋಟ್ಯಾನ್ ಹಾಗೂ ಸಹಸವಾರಿಣಿ ಸೌಮ್ಯ ಎಂದು ಹೆಸರಿಸಲಾಗಿದೆ.
ಲತೀಶ್ ತನ್ನ ಅಟೋ ರಿಕ್ಷಾದಲ್ಲಿ ಹೆಂಡತಿ ಹಾಗೂ ಮಗನೊಂದಿಗೆ ಬಿ ಸಿ ರೋಡು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಕಾವಳಪಡೂರು ಗ್ರಾಮದ ಎನ್ ಸಿ ರೋಡು ಬಳಿ ಕಾರೊಂದು ದ್ವಿಚಕ್ರ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಅಟೋ ರಿಕ್ಷಾ ಹಾಗೂ ಅದರ ಹಿಂದಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಅಟೋ ರಿಕ್ಷಾದಲ್ಲಿ ದಂಪತಿ-ಪುತ್ರನಿಗೆ ಹಾಗೂ ಬೈಕ್ ಸವಾರರಿಬ್ಬರಿಗೂ ಗಾಯಗಳಾಗಿವೆ. ಅಟೋ ರಿಕ್ಷಾ ಪ್ರಯಾಣಿಕರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರೆ, ಬೈಕ್ ಸವಾರರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.