ಕಡಬದಲ್ಲಿ ಕಾಡಾನೆಗಳ ದಂಡು: ಜನರು ಆತಂಕ

ಕಡಬದಲ್ಲಿ ಕಾಡಾನೆಗಳ ದಂಡು: ಜನರು ಆತಂಕ


ಕಡಬ: ಕಳೆದ ಕೆಲ ದಿನಗಳಿಂದ ಕಡಬ ಬಳ್ಳ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡು ಶುಕ್ರವಾರ ಐತೂರು ಗ್ರಾಮದತ್ತ ತೆರಳಿ, ಕೊರಿಯರ್ ಸಮೀಪದ ಅರಣ್ಯ ಇಲಾಖೆಯ ರಬ್ಬರ್ ತೋಟಕ್ಕೆ ನುಗ್ಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

ಹಿಂಡಿನಲ್ಲಿ ಎರಡು ಮರಿಯಾನೆಗಳು ಸೇರಿದಂತೆ ಒಟ್ಟು ಎಂಟು ಕಾಡಾನೆಗಳಿವೆ. ಬಳ್ಳ ಗ್ರಾಮದ ಪಠೋಳಿ ಪ್ರದೇಶದಲ್ಲಿ ಕಾಡಾನೆಗಳ ಹೆಜ್ಜೆ ಗುರುತುಗಳು ಪತ್ತೆಯಾದ ಬಳಿಕ ಹಿಂಡು ಕಲ್ಕಲ್ ಪ್ರದೇಶದತ್ತ ಸಾಗಿತ್ತು. ಈ ವೇಳೆ ಕಾಡಾನೆಗಳು ಹಲವು ಬೈನೆ ಮರಗಳನ್ನು ಮುರಿದು ಹಾನಿಗೊಳಿಸಿವೆ.

ಬಳಿಕ ಆನೆಗಳ ಹಿಂಡು ಎಣ್ಣೆಮಜಲು ಸಮೀಪದ ಬೀರಿಕಾಡು ಪ್ರದೇಶದ ಮೂಲಕ ಸಾಗಿದ್ದು, ನದಿಯನ್ನು ದಾಟಿ ಐತೂರು ಗ್ರಾಮದ ಏನ್ಕೂಪ್ ಕ್ವಾರ್ಟರ್ಸ್ ಹಾಗೂ ಓಟಕಜೆ ಪರಿಸರದ ಮೂಲಕ ಸಾಗಿ ಅರಣ್ಯ ಇಲಾಖೆಯ ರಬ್ಬರ್ ತೋಟವನ್ನು ಪ್ರವೇಶಿಸಿದೆ. ಸದ್ಯ ಕಾಡಾನೆಗಳು ಇದೇ ತೋಟದಲ್ಲಿ ಬೀಡುಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಾಡಾನೆಗಳು ವಸತಿ ಪ್ರದೇಶಗಳು ಹಾಗೂ ಕೃಷಿ ಜಮೀನುಗಳ ಸಮೀಪದಲ್ಲೇ ಇರುವುದರಿಂದ ತೋಟಗಳಿಗೆ ತೆರಳುವ ರೈತರು, ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮಸ್ಥರು ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಹಾಗೂ ಒಂಟಿಯಾಗಿ ಸಂಚರಿಸದಂತೆ ಪರಸ್ಪರ ಸೂಚನೆ ನೀಡುತ್ತಿದ್ದಾರೆ.

ಮಾಹಿತಿ ಲಭ್ಯವಾದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆನೆ ಕಾರ್ಯಪಡೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಕಾಡಾನೆಗಳನ್ನು ಸುರಕ್ಷಿತವಾಗಿ ಮರಳಿ ಕಾಡಿನತ್ತ ಓಡಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article