ಆ.15ರಂದು ಅಮೃತ ಯಕ್ಷಯಾನ’ ಕಾರ್ಯಕ್ರಮ
ಮಂಗಳೂರು: ನಗರದ ಮರೋಳಿಯ ಅಮೃತ ಯಕ್ಷಮಿತ್ರ ಬಳಗದ ದಶಮಾನೋತ್ಸವ ಪ್ರಯುಕ್ತ ‘ಅಮೃತ ಯಕ್ಷಯಾನ’ ಕಾರ್ಯಕ್ರಮ ಆ.15ರಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸೂರ್ಯರಶ್ಮಿ ಪ್ರಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 10ಕ್ಕೆ ಪ್ರಮುಖರಾದ ವೆಂಕಟೇಶ್ ಐತಾಳ್, ಭಾಸ್ಕರ ಐತಾಳ್ ದೀಪ ಪ್ರಜ್ವಲನೆ ಮಾಡುವರು. 10.30ರಿಂದ ಮಧ್ಯಾಹ್ನ 1ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.15ರಿಂದ ಸಂಜೆ 5.30ರವರೆಗೆ ಕವಿ ಚಿನ್ಮಯದಾಸ ವಿರಚಿತ ಶ್ರೀ ಶನೀಶ್ವರ ಮಹಾತ್ಮೆ- ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆ ನೆರವೇರಲಿದೆ ಎಂದು ಕಲಾವಿದ ಕದ್ರಿ ನವನೀತ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6ಕ್ಕೆ ಗಣೇಶ್ ಶೆಟ್ಟಿ ಗುಡ್ಡೆಗುತ್ತು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪ್ರಮುಖರಾದ ಎಸ್. ಪ್ರದೀಪ ಕುಮಾರ ಕಲ್ಕೂರ, ಕದ್ರಿ ನವನೀತ ಶೆಟ್ಟಿ, ಕೇಶವ ಮರೋಳಿ, ಪ್ರವೀಣ್ಚಂದ್ರ ಆಳ್ವ ಸಹಿತ ಗಣ್ಯರು ಭಾಗವಹಿಸುವರು. ಈ ವೇಳೆ ಬಳಗದ ಯಕ್ಷಗುರು ಬಿ.ಎನ್. ಅಶೋಕ್ ಬೋಳೂರು ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ರಾತ್ರಿ 8ರಿಂದ ಬಳಗದಿಂದ ಲಕ್ಷ್ಮೀ ಸ್ವಯಂವರ- ಅಮೃತೋದ್ಭವ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದರು.
ಅಮೃತ ಯಕ್ಷಮಿತ್ರ ಬಳಗ ಕಳೆದ 10 ವರ್ಷಗಳಿಂದ ಯಕ್ಷಗಾನ ತರಬೇತಿ, ತಾಳಮದ್ದಳೆ ಆಯೋಜನೆ ಮತ್ತು ನವರಾತ್ರಿ ಸಂದರ್ಭ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದೆ. ತಂಡದಲ್ಲಿ ಆರು ವರ್ಷದ ಮಕ್ಕಳಿಂದ 50 ವರ್ಷದವರೆಗಿನ ಮಹಿಳೆಯರ ಸಹಿತ 20ಕ್ಕೂ ಅಧಿಕ ಸದಸ್ಯರಿದ್ದಾರೆ ಎಂದು ಹೇಳಿದರು.
ತಂಡದ ಸಂಚಾಲಕ ವೆಂಕಟೇಶ್ ಐತಾಳ್, ಶೋಭಾ ಐತಾಳ್, ಅಶೋಕ್ ಬೋಳೂರು, ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.