ಆ.9ರಂದು ವಿಶ್ವ ಕುಂದಾಪ್ರ ದಿನಾಚರಣೆ: ಕುಂದಾಪ್ರ ಹಬ್ಬ
ಮಂಗಳೂರು: ಕುಡ್ಲ ಕುಂದಾಪುರ ಫೌಂಡೇಶನ್, ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ಆಶ್ರಯದಲ್ಲಿ ‘ವಿಶ್ವ ಕುಂದಾಪ್ರ ದಿನಾಚರಣೆ-ಕುಂದಾಪ್ರ ಹಬ್ಬ’ ಕಾರ್ಯಕ್ರಮ ಆ.9ರಂದು ಬೆಳಗ್ಗೆ 7.30ರಿಂದ ರಾತ್ರಿ 8.30ರವರೆಗೆ ನಗರದ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕುಂದಗನ್ನಡದ ನೆಲದಲ್ಲಿ ಜನಿಸಿ, ವೃತ್ತಿ ನಿಮಿತ್ತ ಮಂಗಳೂರಿಗೆ ಬಂದು ನೆಲೆಸಿ, ತುಳುನಾಡಿನವರೇ ಆಗಿದ್ದರೂ, ತಮ್ಮ ಮೂಲ ನೆಲೆಯ ಭಾಷೆ, ಸಂಸ್ಕೃತಿ ಆಚರಣೆ, ಸಂಪ್ರದಾಯವನ್ನು ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದವರ ಆಶ್ರಯದಲ್ಲಿ ‘ವಿಶ್ವ ಕುಂದಾಪ್ರ ದಿನಾಚರಣೆ’ಯನ್ನು ಆಷಾಢ ಮಾಸದ ಒಂದು ದಿನ ‘ಕುಂದಾಪ್ರ ಹಬ್ಬ’ ಹೆಸರಿನಲ್ಲಿ ಹಲವು ವರ್ಷಗಳಿಂದ ಆಚರಿಸಲಾಗುತ್ತಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷೆ ಮಾಲತಿ ಎಸ್. ಶೆಟ್ಟಿ ಬಾರ್ಕೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ರಕ್ತ ತಪಾಸಣಾ ಶಿಬಿರ ಮಂಜುನಾಥ ಎಸ್.ಎಂ. ಕಾಯ ಹೆಲ್ತ್ಕೇರ್ ಡಯಾಗ್ನೋಸಿಸಸ್ ಆಂಡ್ ಕ್ಲಿನಿಕ್ ವಾಮಂಜೂರು ಅವರಿಂದ ಹಾಗೂ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಎನ್.ಎಸ್.ಎಸ್. ಯುನಿಟ್ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ವೈದ್ಯ ಡಾ. ಅವಿನ್ ಆಳ್ವ ಕೊಳ್ಳೆಬೈಲು ತಂಡದವರಿಂದ ನಡೆಯಲಿದೆ. ಕುಂದಾಪ್ರ ಕನ್ನಡ ಹಬ್ಬವನ್ನು ಬೆಳಿಗ್ಗೆ 8.45ಕ್ಕೆ ದಕ್ಷಿಣ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ.ಬೈಂದೂರು ಉದ್ಘಾಟಿಸುವರು. ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಗ್ರಾಮೀಣ ಕ್ರೀಡಾಕೂಟದಲ್ಲಿ ಗೇರು ಬೀಜ ಗುರಿ ಇಡುವುದು, ಚಮಚ-ಲಿಂಬೆ ಓಟ, ಮಡಲು ನೇಯುವ ಸ್ಪರ್ಧೆ, ತಲೆಯ ಮೇಲೆ ಲೋಟ ಇಟ್ಟು ಓಟ, ಒಂಟಿ ಕಾಲಿನ ಓಟ, ರಂಗೋಲಿ ಸ್ಪರ್ಧೆ, ಬಲೂನು ಜೋಡಿ ಆಟ, ಗೋಲಿ ಗುರಿ ಇಡುವ ಸ್ಪರ್ಧೆ ನಡೆಯಲಿದೆ ಎಂದರು.
ಸಂಜೆ 4ಕ್ಕೆ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸುವರು. ನಿವೃತ್ತ ಅಧಿಕಾರಿ ಶಾನಾಡಿ ಅಜಿತ್ ಕುಮಾರ ಹೆಗ್ಡೆ ಭಾಗವಹಿಸುವರು.
ಸಾಧಕರಾದ ಅಂಕಣಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಉಪನಿರೀಕ್ಷಕ ಸುಜನ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ.
ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.
ಆಯೋಜನಾ ಸಮಿತಿ ಕಾರ್ಯದರ್ಶಿ ಶರತ್ ಆಚಾರ್ಯ, ಕೋಶಾಽಕಾರಿ ನವೀನ್ ಶೆಟ್ಟಿ, ಸಂಚಾಲಕರಾದ ಸಂತೋಷ್ ಶೆಟ್ಟಿ ಅಚ್ಲಾಡಿ, ಸಂತೋಷ್ಕುಮಾರ್ ಶೆಟ್ಟಿ ಐರೋಡಿ ಉಪಸ್ಥಿತರಿದ್ದರು.