ಶಕ್ತಿ ರೆಸಿಡೆನ್ಶಿಯಲ್ ಶಾಲೆ: ಶ್ರೀ ಕೃಷ್ಣಮಯ-2026 ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆಗೆ ಚಾಲನೆ
Saturday, August 29, 2026
ಮಂಗಳೂರು: ಶಕ್ತಿ ವಿದ್ಯಾ ಸಂಸ್ಥೆ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಂಗಳೂರು ಇದರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ಶ್ರೀ ಕೃಷ್ಣಮಯ-2026ರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಡೋ ಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾ ಇದರ ಮುಖ್ಯ ವ್ಯವಸ್ಥಾಪಕ ದಿವಾಕರ್ ಕದ್ರಿ ಅವರು ದೀಪವನ್ನು ಬೆಳಗಿಸಿ, ನಂತರ ಪುಟ್ಟ ಶ್ರೀ ಕೃಷ್ಣನನ್ನು ತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲನ್ನು ತೂಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ‘ಇವತ್ತು ನಮ್ಮ ದೇಶಕ್ಕೆ ಬೇಕಾದದ್ದು ಸಂಸ್ಕಾರಯುತ ಮಕ್ಕಳು. ಅಂತಹ ಶಿಕ್ಷಣ ಇಂದು ಶಕ್ತಿ ಶಾಲೆಯಲ್ಲಿ ಸಿಗ್ತಾ ಇದೆ. ಡಾ. ಕೆ.ಸಿ. ನಾಕ್ ಅವರು ದೇವಸ್ಥಾನ, ಶಾಲೆ ಕಟ್ಟಿ ದೇಶಕ್ಕೆ ಸಮಾಜಕ್ಕೆ ಕೊಡುಗೆಯನ್ನು ಕೊಡುತ್ತಾ ಇರುವುದು ಶ್ಲಾಘನಿಯ. ಕೃಷ್ಣ ಎಲ್ಲಾ ಒಳ್ಳೆಯತನದ ಪ್ರತೀತಿ. ನಮ್ಮೆಲ್ಲರ ಮಕ್ಕಳಿಗೆ ಆ ಕೃಷ್ಣನ ಕೃಪೆ ಅಗತ್ಯವಾಗಿ ಬೇಕಾಗಿದೆ. ನಾರಾಯಣನ ನಾಮ ಮಾತ್ರದಿಂದ ಪುಣ್ಯವನ್ನು ಪಡೆಯಬಹುದು ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರ ಕೂಡ ದೊಡ್ಡದಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ದೇಶದ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಿ ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಈ ಮಣ್ಣಿನಲ್ಲಿ ಜನ್ಮ ತಳೆದ ನಾವೆಲ್ಲರೂ ಧನ್ಯರು. ನಮ್ಮ ದೇಶದ ಹಿರಿಮೆ ಏನೆಂದರೆ ನಾವು ಯಾರ ಮೇಲೆಯೂ ದೌರ್ಜನ್ಯವನ್ನು ಮಾಡೋದಿಲ್ಲ, ವಸುಧೈವ ಕುಟುಂಬಕಂ ಎಂಬ ಮನೋಭಾವದಿಂದ ಎಲ್ಲರನ್ನೂ ನಮ್ಮವರೆಂದು ಕಾಣುವವರು ನಾವು. ಪ್ರಪಂಚದಲ್ಲಿ ಈ ವಸುದೈವ ಕುಟುಂಬಕಮ್ ಎಂಬ ನಲ್ನುಡಿ ಪ್ರಪಂಚದಾದ್ಯಂತ ಹರಡಲಿ ಮಕ್ಕಳಿಗೆ ಶ್ರೀ ಕೃಷ್ಣ ಆಶೀರ್ವದಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಸಿ. ನಾಕ್ ಮಾತನಾಡಿ, ಶಕ್ತಿ ವಿದ್ಯಾ ಸಂಸ್ಥೆ ಆ ಶ್ರೀ ಕೃಷ್ಣನ ಪ್ರೇರಣೆಯಿಂದ ನಿರ್ಮಾಣವಾಗಿದೆ. ಇಂದು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಸ್ವಾಗತಿಸಿದರು. ಶಿಕ್ಷಕಿ ಹರಿಣಿ ಮತ್ತು ಮಧುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










