ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ: ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ
Saturday, August 29, 2026
ಮಂಗಳೂರು: ಕರುಣೆ, ಸಹೋದರತ್ವ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಸಂದೇಶ ಸಾರುವ ನಿಟ್ಟಿನಲ್ಲಿ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಬಂಧಿಗಳು ಹಾಗೂ ಜೈಲು ಸಿಬ್ಬಂದಿಯನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಸಹೋದರತ್ವ ಮತ್ತು ಮಾನವೀಯತೆಯ ಭಾವನೆ ಮೂಡಿಸಲಾಯಿತು.
ಬಂಧಿಗಳು, ಜೈಲು ಸಿಬ್ಬಂದಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಯಂಸೇವಕರಿಗೆ ದೇವರ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
ರಕ್ಷಾಬಂಧನದ ಮಹತ್ವದ ಕುರಿತು ಮಾತನಾಡಿದ ಡೋರಾ ಡಿಸೋಜಾ ಅವರು, ಈ ಹಬ್ಬವು ಕೇವಲ ರಕ್ತ ಸಂಬಂಧಗಳಿಗೆ ಸೀಮಿತವಾಗಿಲ್ಲ. ಪ್ರೀತಿ, ರಕ್ಷಣೆ, ಪರಸ್ಪರ ಗೌರವ, ಸಹೋದರತ್ವ ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಜನರನ್ನು ಒಂದಾಗಿಸುವ ಬಾಂಧವ್ಯವನ್ನು ರಕ್ಷಾಬಂಧನ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ, ರಕ್ಷಾಬಂಧನವು ಭರವಸೆ ಹಾಗೂ ಪರಿವರ್ತನೆಯ ಸಂದೇಶವನ್ನು ಸಾರುತ್ತದೆ ಎಂದ ಅವರು, ಇಂದು ನಾವು ಸಹೋದರತ್ವವನ್ನು ಆಚರಿಸುತ್ತಿದ್ದೇವೆ. ರಾಖಿ ಕಟ್ಟುವ ಮೂಲಕ ಪಿಎಂಐ ಸದಸ್ಯರು ನಿಮ್ಮ ಮೇಲಿನ ಪ್ರೀತಿ, ಬೆಂಬಲ ಹಾಗೂ ನೀವು ಈ ಜೈಲಿನಿಂದ ಹೊರಬಂದ ಬಳಿಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ನೆರವಾಗುವ ಸಿದ್ಧತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಪಿಎಂಐ ಸ್ವಯಂಸೇವಕರು ಬಂಧಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿದರು. ಇದು ಪರಸ್ಪರ ಗೌರವ, ಐಕ್ಯತೆ ಮತ್ತು ಸಹೋದರತ್ವದ ಸಂಕೇತವಾಗಿ ಮೂಡಿಬಂತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
ಈ ರಕ್ಷಾಬಂಧನ ಆಚರಣೆಯಲ್ಲಿ 370 ಮಂದಿ ಬಂಧಿಗಳು ಹಾಗೂ 50 ಮಂದಿ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪಿಎಂಐ ವತಿಯಿಂದ 17 ಸದಸ್ಯರು, ಸಂಯೋಜಕ ಡೊನಾಲ್ಡ್ ಕಟಿನ್ಹೊ, ಕಾರ್ಯದರ್ಶಿ ಸಿಸ್ಟರ್ ಜ್ಯೋತ್ಸ್ನ ಎ.ಸಿ. ಉಪಸ್ಥಿತರಿದ್ದರು.



