ಎಚ್.ಐ.ವಿ ಮುಕ್ತ ಭಾರತ 2030ರ ಗುರಿ ತಲುಪಲು ಎಲ್ಲರ ಸಹಕಾರ ಅತ್ಯಗತ್ಯ: ಡಾ. ಗಿರಿಜಾತಾಯಿ
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಕೇಂದ್ರಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಮಹತ್ಕಾರ್ಯದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ವಿವಿಧ ಇಲಾಖೆಗಳ ಜೊತೆಗೆ ಸಾರ್ವಜನಿಕರೂ ಸಹ ಸಹಕರಿಸಿ ಸಮನ್ವಯತೆಯಿಂದ ಕೆಲಸ ನಿರ್ವಹಿಸುವುದು ಅತ್ಯಗತ್ಯ. ಜನಸಾಮಾನ್ಯರನ್ನು ಜಾಗೃತಿಗೊಳಿಸುವುದು ಎಲ್ಲಾ ಸಿಬ್ಬಂದಿಗಳ ಆದ್ಯ ಕರ್ತವ್ಯ ಹಾಗೂ ಎಚ್.ಐ.ವಿ ಮುಕ್ತ ಭಾರತ ನಿರ್ಮಾಣ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಅರ್ಥೈಸಿಕೊಂಡು ಗುರಿಯನ್ನು ಸಾಧಿಸಬೇಕು ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಎಚ್.ಐ.ವಿ ಮುಕ್ತ ಭಾರತ ನಿರ್ಮಾಣ ಎಂಬ ಗುರಿಯನ್ನು 2030ರ ಅಂತ್ಯದ ಒಳಗೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮೂಲಸೌಕರ್ಯ ವಿಭಾಗದ ಜಂಟಿ ನಿರ್ದೇಶಕಿ ಡಾ. ಗಿರಿಜಾತಾಯಿ ಹಾಗೂ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಪುತ್ತೂರು ಐಸಿಟಿಸಿ (ICTC) ಕೇಂದ್ರ ತಾಲೂಕು ಸಾರ್ವಜನಿಕ ಆಸ್ಪತ್ರೆ, ಉಳ್ಳಾಲ ಸರಕಾರಿ ನಗರ ಸಮುದಾಯ ಆರೋಗ್ಯ ಕೇಂದ್ರ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಐಸಿಟಿಸಿ ಮತ್ತು ಎ.ಆರ್.ಟಿ ಕೇಂದ್ರ ಹಾಗೂ ಅತ್ತಾವರ ಕೆಎಂಸಿ ಆಸ್ಪತ್ರೆಯ ಎಸ್.ಆರ್.ಎಲ್, ಐಸಿಟಿಸಿ ಮತ್ತು ಎ.ಆರ್.ಟಿ ಕೇಂದ್ರಗಳಿಗೆ ಭೇಟಿ ನೀಡಿ ಗುರಿ ಸಾಧನೆಗಳ ಪರಿಶೀಲನೆ ನಡೆಸಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಭೇಟಿಯ ಸಂದರ್ಭದಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮೂಲಸೌಕರ್ಯ ವಿಭಾಗದ ಉಪನಿರ್ದೇಶಕ ಡಾ. ಹನುಮಂತ ರಾಯಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಖತೀಜ ದಿಲ್ ಶಾದ್ ಎಂ. ಪಿ. , ಐಸಿಟಿಸಿ ಮತ್ತು ಎ.ಆರ್.ಟಿ ನೋಡಲ್ ವೈದ್ಯಾಧಿಕಾರಿ ಡಾ. ಸುಬೋಧ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.