ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಮೇಲೆ ಹಲ್ಲೆ: ದರೋಡೆ 3 ದಿನದೊಳಗೆ ಆರೋಪಿಗಳ ಬಂಧನ
ಮಂಗಳೂರು: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.3 ರಂದು ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಸರೋಡೆ ಮಾಡಿದ ಆರೋಪಿಗಳನ್ನು ಮೂರು ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಉರ್ವದ ಮಟದಕಣಿಯ ಕೊರ್ದಬ್ಬು ದೇವಸ್ಥಾನದ ನಿವಾಸಿ ಬಾಲ ಸುಬ್ರಮಣ್ಯ (49), ಮಂಗಳೂರಿನ ಮಣ್ಣಗುಡ್ಡದ ಬೊಕ್ಕಪಟ್ಟಣ ಚರ್ಚ್ ಬಳಿಯ ನಿವಾಸಿ ಶ್ಯಾಮ್ ಕುಮಾರ್ (33) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಲಿಗೆ ಮಾಡಲಾದ ಸಂಪೂರ್ಣ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಬೈಕ್ನ್ನು ಸ್ವಾಧೀನ ಪಡಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆಯ ವಿವರ:
ಆ.3 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ 76 ವರ್ಷದ ವೃದ್ಧ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ, ಮನೆಯ ಬಾಗಿಲನ್ನು ಯಾರೋ ಬಡಿಯುತ್ತಿರುವುದನ್ನು ಗಮನಿಸಿ ಬಾಗಿಲು ತೆರೆದಾಗ, ಮನೆಯ ಮೆಟ್ಟಿಲಿನ ಬಳಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಮನೆ ಬಾಗಿಲನ್ನು ತೆಗೆದು ಅವರನ್ನು ವಿಚಾರಿಸುತ್ತಿದ್ದಾಗಲೇ ಮನೆ ಬಾಡಿಗೆಗೆ ಎಂದು ಮಾಡನಾಡುತ್ತಾ ಆರೋಪಿಗಳು ಬಾಗಿಲನ್ನು ಬಲವಂತವಾಗಿ ದೂಡಿ, ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಕೆಳಕ್ಕೆ ಬೀಳಿಸಿ, ಅವರ ಮೇಲೆ ಹಲ್ಲೆ ನಡೆಸಿ, ಆಕೆಯ ಬಳಿಯಿದ್ದ ಒಂದು ಚಿನ್ನದ ಸರ ಹಾಗೂ ಬಳೆಯನ್ನು ಬಲವಂತವಾಗಿ ದೋಚಿಕೊಂಡು ಪರಾರಿಯಾಗಿರುತ್ತಾರೆ.
ಸುಲಿಗೆ ಮಾಡಲಾದ ಚಿನ್ನಾಭರಣಗಳ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 3 ಲಕ್ಷ ರೂ. ಆಗಿರುತ್ತದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 88/2026, ಕಲಂ 332, 309(6) ಜೊತೆಗೆ 3(5) ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಧಿತ ಆರೋಪಿಗಳಾದ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತವೆ.
ಈ ಪತ್ತೆ ಕಾರ್ಯವು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ನಡೆದಿದ್ದು, ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿರೂಪಾಕ್ಷ ಸ್ವಾಮಿ ಹಾಗೂ ಕೊಣಾಜೆ ಪೊಲೀಸ್ ಠಾಣೆಯ ಪಿ.ಎಸ್.ಐ. ನಾಗರಾಜ್ ಮತ್ತು ಪುನೀತ್ ಗಾಂವಕರ್, ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ. ಸೃಜನ್ ಶೆಟ್ಟಿ, ಹೆಚ್.ಸಿ. ಇಸಾಕ್, ಹೆಚ್.ಸಿ. ಸುನೀಲ್, ಹೆಚ್.ಸಿ. ಶೈಲೇಂದ್ರ ಹಾಗೂ ಹೆಚ್.ಸಿ. ಬಸವನಗೌಡ ಮತ್ತಿತರರು ಭಾಗವಹಿಸಿದ್ದರು.