80ನೇ ಸ್ವಾತಂತ್ರ್ಯ ದಿನಾಚರಣೆ: ಆಂತರಿಕ ಸ್ವಾತಂತ್ರ್ಯದೊಂದಿಗೆ ಸದೃಢ ಭಾರತ ನಿರ್ಮಾಣಕ್ಕೆ ಕರೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಲಾಲ್ಬಾಗ್ ನ ಜೆಸಿಐನ ಅಧ್ಯಕ್ಷ ನರೇಶ್ ಕುಮಾರ್ ಶೆಟ್ಟಿ ಹಾಗೂ ವ್ಯಾಪಾರಿ ಯಶವಂತ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಹ್ಮಾಕುಮಾರಿ ವಿಶ್ವೇಶ್ವರಿಯವರು “ಸ್ವಾತಂತ್ರ್ಯವೆಂದರೆ ಕೇವಲ ಬಾಹ್ಯ ಬಂಧನಗಳಿಂದ ಮುಕ್ತಿ ಪಡೆಯುವುದಲ್ಲ; ಕೋಪ, ದ್ವೇಷ, ಅಹಂಕಾರ, ಭಯ, ವ್ಯಸನ ಮತ್ತು ನಕಾರಾತ್ಮಕ ಚಿಂತನೆಗಳಿಂದ ಮನಸ್ಸನ್ನು ಮುಕ್ತಗೊಳಿಸುವುದೇ ನಿಜವಾದ ಆಂತರಿಕ ಸ್ವಾತಂತ್ರ್ಯ” ಎಂದು ತಿಳಿಸಿದರು.
ಭಾರತದ ನಿಜವಾದ ಶಕ್ತಿ ಅದರ ಆಧ್ಯಾತ್ಮಿಕ ಮೌಲ್ಯಗಳು, ಸಂಸ್ಕೃತಿ ಮತ್ತು ಸಹಬಾಳ್ವೆಯ ಪರಂಪರೆಯಲ್ಲಿದೆ. ಪ್ರತಿಯೊಬ್ಬ ನಾಗರಿಕನು ತನ್ನ ಚಿಂತನೆ ಮತ್ತು ಕರ್ಮಗಳಲ್ಲಿ ಶುದ್ಧತೆ, ಪ್ರೀತಿ, ಶಾಂತಿ ಹಾಗೂ ಸಹಕಾರವನ್ನು ಬೆಳೆಸಿಕೊಂಡಾಗ ಮಾತ್ರ ಸದೃಢ, ಸ್ವಚ್ಛ, ಶಾಂತಿಯುತ ಮತ್ತು ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಧ್ಯಾನ ಮತ್ತು ರಾಜಯೋಗದ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸಿಕೊಂಡು, ಕುಟುಂಬದಲ್ಲಿ ಶಾಂತಿ, ಸಮಾಜದಲ್ಲಿ ಸೌಹಾರ್ದತೆ ಹಾಗೂ ರಾಷ್ಟ್ರದಲ್ಲಿ ಏಕತೆಯನ್ನು ಬೆಳೆಸುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ಕೈಗೊಳ್ಳಲಾಯಿತು.
ದೇಶಭಕ್ತಿಯ ಭಾವನೆ, ಆಧ್ಯಾತ್ಮಿಕ ಜಾಗೃತಿ ಮತ್ತು ‘ವಸುದೈವ ಕುಟುಂಬಕಂ’ ಎಂಬ ಭಾರತದ ಶ್ರೇಷ್ಠ ಸಂದೇಶವನ್ನು ಸಾರುವ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ನೆರವೇರಿತು.
