ಅಪಘಾತ ಪ್ರಕರಣ: ಬಸ್ ಚಾಲಕ, ಮಾಲಕನಿಗೆ ಜೈಲುಶಿಕ್ಷೆ, ದಂಡ
ಮಂಗಳೂರು: ಚಾಲನಾ ಅನುಜ್ಞಾ ಪತ್ರ (ಲೈಸನ್ಸ್) ಇಲ್ಲದೆ ಬಸ್ ಚಲಾಯಿಸಿದ ವೇಳೆ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನ್ಯಾಯಾಲಯವು ಚಾಲಕ ನಿಶಿತ್ ಶೆಟ್ಟಿ ಮತ್ತು ಮಾಲಕ ಪ್ರೀತಂ ದೇವೇಂದ್ರ ಕುಲಾಲ್ಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಬೆಂದೂರ್ವೆಲ್ ಜಂಕ್ಷನ್ ಬಳಿ 2024ರ ಜು.10 ರಂದು ಸುಂದರಿ (66) ಎಂಬವರು ಶಕ್ತಿನಗರಕ್ಕೆ ಹೋಗುವ ಬಸ್ಸನ್ನು ಹತ್ತಲು ರಸ್ತೆ ದಾಟುತ್ತಿದ್ದಾಗ ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್ಬ್ಯಾಂಕ್ ಕಡೆಗೆ ಚಲಿಸುತ್ತಿದ್ದ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದ ಸುಂದರಿಯ ಬಲಕಾಲಿನ ಮೇಲೆ ಬಸ್ ಹರಿಯಿತು. ಈ ಬಗ್ಗೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಚಾಲಕ ನಿಶಿತ್ ಶೆಟ್ಟಿಗೆ ಲೈಸನ್ಸ್ ಇಲ್ಲದಿರುವುದು ಬೆಳಕಿಗೆ ಬಂತು. ಅಪಘಾತದ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯ ಅಂದಿನ ಹೆಡ್ ಕಾನ್ಸ್ಟೆಬಲ್ ಲಕ್ಷ್ಮಿಕಾಂತ್ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪಟ್ಟಿಯಲ್ಲಿ ಇದನ್ನು ಉಲ್ಲೇಖಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರು ಜೆಎಂಎಫ್ಸಿ ೮ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷ ಆರ್. ಆರೋಪಿ ಬಸ್ ಚಾಲಕ ನಿಶಿತ್ ಶೆಟ್ಟಿಗೆ ಲೈಸನ್ಸ್ ಇಲ್ಲದೆ ಬಸ್ಸು ಚಲಾಯಿಸಿದ್ದಕ್ಕೆ 1 ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ಮತ್ತು ಲೈಸನ್ಸ್ ಇಲ್ಲದೆ ಬಸ್ಸನ್ನು ಚಾಲಯಿಸಲು ಅವಕಾಶ ನೀಡಿದ್ದಕ್ಕೆ ಬಸ್ ಮಾಲಕ ಪ್ರೀತಮ್ ದೇವೇಂದ್ರ ಕುಲಾಲ್ಗೆ 1 ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ವಿಧಿಸಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಆರೋನ್ ಡಿಸೋಜ ವಿಟ್ಲ ವಾದಿಸಿದ್ದರು.