ಭಾರತದ ಸಂವಿದಾನಕ್ಕೆ ಅವಮಾನಿಸಿದ ಜಮೀರ್ ಅಹಮ್ಮದ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಿ: ಸತೀಶ್ ಕುಂಪಲ
ಮಂಗಳೂರು: ದೇಶದ ಜನತೆ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದ್ದರೆ, ಕರ್ನಾಟಕ ಸರ್ಕಾರದ ಸಚಿವರಾದ ಜಮೀರ್ ಅಹಮ್ಮದ್ ಅವರಿಗೆ ತ್ರಿವರ್ಣ ಧ್ವಜರೋಹಣ ಮಾಡಲು ಸಮಯವಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ರಾಷ್ಟ್ರಕ್ಕೆ ಮಾಡಿರುವ ಅಗೌರವವಾಗಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರ ಈ ದುರ್ವರ್ತನೆಗೆ ಸಂವಿಧಾನದ ಪುಸ್ತಕವನ್ನು ಹಿಡಿದೇ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಿರುವ ಡಿ.ಕೆ. ಶಿವಕುಮಾರ್ ಅವರು ತಲೆಯಾಡಿಸಿರುವುದು ಶಕ್ತಿಹೀನರಾಗಿರುವಂತೆ ತೋರುತ್ತಿದೆ. ಅವರು ಜಮೀರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಧೈರ್ಯ ತೋರಲಿ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಜಮೀರ್ ಅವರು ವಂದೇ ಮಾತರಂ ಗೀತೆಯನ್ನು ಹಾಡಬೇಕೆಂಬ ಕಾರಣಕ್ಕಾಗಿ ಸ್ವಾತಂತ್ರ್ಯ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆಯೇ? ಎನ್ನುವ ಸಂಶಯ ಮೂಡುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂನ ಪಾತ್ರ ದೊಡ್ಡದು, ಅದಕ್ಕೆ ಅಗತ್ಯವಾಗಿ ಸಿಗಬೇಕಿದ್ದ ಗೌರವವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ದೇಶವನ್ನೇ ಅಪಮಾನಿಸುವಂತಹ ಕೆಲಸವನ್ನು ಮಂತ್ರಿಗಳು ಮಾಡಿದರೂ ಕಾಂಗ್ರೆಸ್ ಹೈಕಮಾಂಡಿಗೂ ಕ್ರಮ ಕೈಗೊಳ್ಳುವ ತಾಕತಿಲ್ಲ. ಸಂಸತ್ತಿನಲ್ಲಿ ಮಾತುಮಾತಿಗೂ ಸಂವಿಧಾನದ ಪುಸ್ತಕವನ್ನು ತೋರಿಸುತ್ತಾ ನಾಟಕ ಮಾಡುವ ರಾಹುಲ್ ಗಾಂಧಿ ಅವರು ಯಾಕೆ ಮೌನವಾಗಿದ್ದಾರೆ. ದೇಶಕ್ಕೆ ದೇಶವೇ ಅಭಿಮಾನ ಪಡುವ ತ್ರಿವರ್ಣ ಧ್ವಜವನ್ನು ಅರಳಿಸಲು ಸಮಯವಾಕಶ ಇರದ ಇಂತಹ ಸಚಿವರನ್ನು ಒಳಗೊಂಡ ಈ ಸರ್ಕಾರಕ್ಕೆ ಜನರೇ ಬುದ್ದಿ ಕಲಿಸಬೇಕು ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.